ಉಡುಪಿ: ಭಾರತದ ಇತಿಹಾಸವೆಂದರೆ ಬ್ರಾಹ್ಮಣರ ಮತ್ತು ದಲಿತರ ನಡುವಿನ ಸಂಘರ್ಷದ ಇತಿಹಾಸ. ಮಹಿಷ ಮಂಡಲದ ಮಹಿಷಾಸುರ ನಾಡಿನ ಸಾಂಸ್ಕೃತಿಕ ನಾಯಕ, ದಲಿತರ ಮಹಾ ಅಸ್ಮಿತೆ ಎಂದು ದಲಿತ ಚಿಂತಕ ಜಯನ್ ಮಲ್ಪೆ ಹೇಳಿದರು.
ಅಂಬೇಡ್ಕರ್ ಯುವಸೇನೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಮಲ್ಪೆಯ ಸರಸ್ವತಿ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ಮಹಿಷಾಸುರನಿಗೆ ಪುಷ್ಪಾರ್ಚನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಮಹಿಷಾಸುರನ ಪಾತ್ರವನ್ನು ಪುರಾಣಗಳು ಸೃಷ್ಟಿಸಿರುವ ಬಗೆ ಆಕ್ಷೇಪಾರ್ಹವಾದದ್ದು. ವೈದಿಕ ಸಿದ್ಧಾಂತವನ್ನು ವಿರೋಧಿಸುವವರನ್ನು ರಾಕ್ಷಸ ಎಂದು ಬಿಂಬಿಸಲಾಗಿದೆ ಎಂದು ಅವರು ಪ್ರತಿಪಾದಿಸಿದರು.
ಸುಳ್ಳೆಂಬ ಮೋಡಗಳು ಸತ್ಯವೆಂಬ ಸೂರ್ಯನನ್ನು ಮುಚ್ಚಿಡಲು ಸಾಧ್ಯವಿಲ್ಲ. ಅಂತೆಯೇ ಪುರಾಣವೆಂಬ ಕತ್ತಲೆಯಿಂದ ಇತಿಹಾಸದ ಬೆಳಕಿನೆಡೆಗೆ ದಲಿತರನ್ನು ಮುನ್ನಡೆಸುವುದೇ ಮಹಿಷಾಸುರನ ಪ್ರತಿ ಸಂಸ್ಕೃತಿ ಹಬ್ಬ ಎಂದರು.
ಜಿಲ್ಲಾ ಘಟಕ ಅಧ್ಯಕ್ಷ ಗಣೇಶ್ ನೆರ್ಗಿ ಮಾತನಾಡಿ, ಈ ಬಾರಿ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಮಹಿಷಾಸುರನಿಗೆ ಸಾಂಕೇತಿಕವಾಗಿ ಪುಷ್ಪಾರ್ಚನೆ ಕಾರ್ಯಕ್ರಮ ಆಯೋಜಿಸಿದ್ದು, ಮುಂದಿನ ವರ್ಷ ಜಿಲ್ಲೆಯ ಎಲ್ಲಾ ಗ್ರಾಮ, ಹೋಬಳಿ ಮಟ್ಟದಲ್ಲಿ ಮಹಿಷಾಸುರ ದಸರಾ ಏರ್ಪಡಿಸಲಾಗುವುದು ಎಂದು ತಿಳಿಸಿದರು.
ಅಂಬೇಡ್ಕರ್ ಯುವಸೇನೆಯ ಸ್ಥಾಪಕ ಅಧ್ಯಕ್ಷ ಹರೀಶ್ ಸಾಲ್ಯಾನ್ ಮಾತನಾಡಿದರು. ಭಗವಾನ್, ಸತೀಶ್ ಕಪ್ಪೆಟ್ಟು, ಪ್ರಸಾದ್ ಮಲ್ಪೆ, ಅರುಣ್ ಸಾಲ್ಯಾನ್, ಸಾಧು ಚಿಟ್ಪಾಡಿ, ಸುಶೀಲ್ ಕುಮಾರ್, ರವಿರಾಜ್ ಲಕ್ಷ್ಮಿನಗರ, ವಸಂತ ಅಂಬಲಪಾಡಿ, ಸಧಾಕರ್ ನೆರ್ಗಿ, ಯೋಗೀಶ್ ಮಲ್ಪೆ, ಸುರೇಶ್ ತೊಟ್ಟಂ ಇದ್ದರು. ದೀಪಕ್ ಕೊಡವೂರು ಸ್ವಾಗತಿಸಿದರು. ಗುಣವಂತ ತೊಟ್ಟಂ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.