ಪಡುಬಿದ್ರಿ: ಮಹಾರಾಷ್ಟ್ರದಿಂದ ಬಂದ ದಕ್ಷಿಣ ಕನ್ನಡ ಜಿಲ್ಲೆಯ ಮಂದಿ ಬುಧವಾರ ಹುಟ್ಟೂರಿಗೆ ಬಂದಿದ್ದು, ಅಧಿಕಾರಿಗಳಲ್ಲಿ ಕ್ವಾರೆಂಟೈನ್ನ ಗೊಂದಲದಿಂದ ಸುಮಾರು 6 ಗಂಟೆಗಳ ಕಾಲ ಹೆಜಮಾಡಿ ಚೆಕ್ಪೋಸ್ಟ್ನಲ್ಲಿ ಉಳಿಯಬೇಕಾಯಿತು.
ಮಹಾರಾಷ್ಟ್ರದ ವಿವಿಧೆಡೆಗಳಲ್ಲಿ ಇದ್ದ ಮಹಾರಾಷ್ಟದ ಮುಂಬೈ ಕಡೆಯಿಂದ ಬೆಳ್ತಂಗಡಿಯ ಗರ್ಡಾಡಿ, ಬಂಟ್ವಾಳ ತಾಲ್ಲೂಕಿನ ವಾಮದಪದವು, ಕೋಲ್ನಾಡು, ಬಜ್ಪೆಯ ಕೆಂಜಾರು ಮುಂತಾದೆಡೆಗೆ ಬಂದ ಪ್ರಯಾಣಿಕರು ಬೆಳಿಗ್ಗೆ ಸುಮಾರು 9ಗಂಟೆಯ ವೇಳೆಗೆ ಹೆಜಮಾಡಿ ಚೆಕ್ಪೋಸ್ಟ್ಗೆ ತಲುಪಿದ್ದರು.
ಚೆಕ್ಪೋಸ್ಟ್ನಲ್ಲಿ ಕ್ವಾರೆಂಟೈನ್ ಕುರಿತು ಅಧಿಕಾರಿಗಳೇ ಗೊಂದಲದಲ್ಲಿದ್ದು, ಸಂಜೆ 3ಗಂಟೆಯವರೆಗೂ ಕಾದು ಸುಸ್ತಾದ ಪ್ರಯಾಣಿಕರು ಸ್ವತಃ ಅಧಿಕಾರಿಗಳಿಗೆ ಕರೆ ಮಾಡುತ್ತಿದ್ದರೂ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಸಮಸ್ಯೆಗೊಳಗಾದ ಪ್ರಯಾಣಿಕರು ದೂರಿದ್ದಾರೆ. ಮಹಾರಾಷ್ಟ್ರದಿಂದ ಆಗಮಿಸಿದವರನ್ನು ಸರ್ಕಾರಿ ಕ್ವಾರೆಂಟೈನ್ಗೆ ಒಳಪಡಿಸಲಾಗಿದೆಯಾದರೂ, ತಪಾಸಣಾ ಕೇಂದ್ರದಿಂದ ಅವರನ್ನು ಕ್ವಾರೆಂಟೈನ್ ಸ್ಥಳಕ್ಕೆ ಕರೆದೊಯ್ಯುವ ಯಾವುದೇ ಸೂಕ್ತ ವ್ಯವಸ್ಥೆಗಳಿಲ್ಲದೆ, ಬಂದ ಕಾರಿನಲ್ಲಿ ಮನೆಗೂ ಹೊಗಲಾಗದೆ ಕಂಗಾಲಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.