ಹೆಬ್ರಿ: ‘ನಾವು ಕೇರಳವನ್ನು ದೇವರನಾಡು ಎಂದು ಕರೆಯುತ್ತೇವೆ. ಧಾರ್ಮಿಕ ಕಾರ್ಯ, ಸೇವೆಯನ್ನು ಗಮನಿಸಿದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯೇ ದೇವರನಾಡು’ ಎಂದು ಬೆಳಗಾವಿಯ ರಂಗ ನಿರ್ದೇಶಕ ಶ್ರೀಪತಿ ಮಂಜನಬೈಲು ಬಣ್ಣಿಸಿದರು.
ಅವರು ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆ, ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ 1 ವರ್ಷ ಕಾಲ ನಡೆಯುವ ಸುವರ್ಣ ಕರ್ನಾಟಕ ರಂಗ ಅಭಿಯಾನ ಮತ್ತು ಸುವರ್ಣ ಕರ್ನಾಟಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತೆಲುಗಿನಲ್ಲೂ ವ್ಯವಸಾಯ ರಂಗಭೂಮಿಯನ್ನು ಸೃಷ್ಟಿಸಿದ ಖ್ಯಾತಿ ಕನ್ನಡ ರಂಗಭೂಮಿಯದು. ಸುಕುಮಾರ್ ಮೋಹನ್ ಅವರಂತಹ ಶ್ರೇಷ್ಠ ರಂಗನಟರು ಕಲಾಸೇವೆಯಲ್ಲಿ ಸಕ್ರಿಯರಾಗಿರುವ ಕಾರಣದಿಂದಲೇ ರಂಗಭೂಮಿ ಇಂದಿಗೂ ಉಳಿದಿದೆ. ಮುದ್ರಾಡಿಯಲ್ಲಿ ಧರ್ಮಕಾರ್ಯದ ಜೊತೆಗೆ ಕಲಾಸೇವೆ ಮಾಡುವ ಮೂಲಕ ನಮ ತುಳುವೆರ್ ಕಲಾಸಂಘಟನೆ ವಿಶ್ವ ಪ್ರಸಿದ್ಧವಾಗಿದೆ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ವಾಸ್ತುತಜ್ಞ ಕಾರ್ಕಳದ ಪ್ರಮಲ್ ಕುಮಾರ್ ಮಾತನಾಡಿ, ಸುವರ್ಣ ಕರ್ನಾಟಕ ರಂಗ ಅಭಿಯಾನ ಯಶಸ್ವಿಯಾಗಿ ಮುದ್ರಾಡಿ ಕ್ಷೇತ್ರ ಬೆಳಗಲಿ ಎಂದು ಹಾರೈಸಿದರು.
ಮುದ್ರಾಡಿ ನಮತುಳುವೆರ್ ಕಲಾ ಸಂಘಟನೆ, ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ನೀಡುವ ಸುವರ್ಣ ಕರ್ನಾಟಕ ಪ್ರಶಸ್ತಿಯನ್ನು ಶಂಕರಪುರ ದ್ವಾರಕಾಮಯಿ ಮಠದ ಸಾಯಿ ಈಶ್ವರ್ ಗುರೂಜಿ, ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಮೋಕ್ತೇಸರ ಧನಂಜಯ ಶೆಟ್ಟಿ, ಅರಸಮ್ಮಕಾನು ನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಮೋಕಸ್ತೇರ ಚಂದ್ರಶೇಖರ ಶೆಟ್ಟಿ, ಧಾರ್ಮಿಕ ಮುಂದಾಳು ಹೆಬ್ರಿ ಭಾಸ್ಕರ ಜೋಯಿಸ್ ಅವರಿಗೆ ಪ್ರದಾನ ಮಾಡಲಾಯಿತು.
ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆ ಅಧ್ಯಕ್ಷ ಧರ್ಮಾಧಿಕಾರಿ ಸುಕುಮಾರ್ ಮೋಹನ್ ಆಶೀರ್ವಚನ ನೀಡಿದರು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಮುದ್ರಾಡಿ ಗ್ರಾಮ ಪಂಚಾಯಿತಿ ಸದಸ್ಯ ಗಣಪತಿ ಇದ್ದರು. ನಾಟ್ಕ ಮುದ್ರಾಡಿ ತಂಡದಿಂದ ಸುಕುಮಾರ್ ಮೋಹನ್ ನಿರ್ದೇಶನದ ಪುನರ್ನವ ಚೇತನ ನಾಟಕ ಮತ್ತು ಬೆಂಗಳೂರಿನ ರಂಗಾಸ್ಥೆ ಸಂಸ್ಥೆ ತಂಡದಿಂದ ಗಣೇಶ್ ಮಂದಾರ್ತಿ ನಿರ್ದೇಶನದ ದ್ರೋಪತಿ ಹೇಳ್ತವ್ಳೆ ನಾಟಕ ಪ್ರದರ್ಶನಗೊಂಡಿತು. ಪ್ರಾಧ್ಯಾಪಕ ಪ್ರವೀಣ್ ಕುಮಾರ್ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.