ಉಡುಪಿ: ಪುದು ಗ್ರಾಮ ಪಂಚಾಯ್ತಿ ಸದಸ್ಯ ಹಾಗೂ ಮೀನಿನ ವ್ಯಾಪಾರಿ ಮಹಮ್ಮದ್ ರಿಯಾಜ್ ಕೊಲೆ ಯತ್ನ ಪ್ರಕರಣ ನಾಲ್ವರು ಆರೋಪಿಗಳನ್ನು ಈಚೆಗೆ ಮಲ್ಪೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮಹಮ್ಮದ್ ಆಶೀಕ್ ಹಾಗೂ ಮಹಮ್ಮದ್ ಮಿಸ್ತಾ, ತೌಶಿರ್, ಮಹಮ್ಮದ್ ತೌಸಿಫ್ ಬಂಧಿತರು. ಈ ಹಿಂದೆಯೇ ಇಸ್ಮಾಯಿಲ್, ಮಹ್ಮದ್ ಗೌಡ್, ಅಬ್ದುಲ್ ಕೈಸ್, ಮಹಮ್ಮದ್ ಮುನೀಜ್, ಅನ್ಸಾರ್ ಎಂಬ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇದೀಗ ಮತ್ತೆ ನಾಲ್ವರನ್ನು ಬಂಧಿಸುವ ಮೂಲಕ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಿದಂತಾಗಿದೆ.
ಮಹಮ್ಮದ್ ಇಸ್ಮಾಯಿಲ್ ಎಂಬಾತ ರಿಯಾಜ್ ಕೊಲೆಗೆ ಸುಪಾರಿ ನೀಡಿದ್ದ ಎನ್ನಲಾಗಿದೆ. ಕಾಂಪ್ಲೆಕ್ಸ್ ಕಟ್ಟುವ ಹಾಗೂ ಮೀನಿನ ಶಾಪ್ ನಿರ್ಮಾಣ ಮಾಡುವ ವಿಚಾರವಾಗಿ ಉಂಟಾದ ವೈಷಮ್ಯವೇ ರಿಯಾಜ್ ಅವರ ಕೊಲೆ ಯತ್ನಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದ್ದು, ಮೂವರು ಆರೋಪಿಗಳನ್ನು ಶಿವಮೊಗ್ಗ ಜೈಲಿಗೆ, 6 ಆರೋಪಿಗಳನ್ನು ಹಿರಿಯಡ್ಕ ಜೈಲಿಗೆ ಹಾಕಲಾಗಿದೆ.
ಘಟನೆ ಹಿನ್ನೆಲೆ:ಜೂನ್ 7ರಂದು ಮಂಗಳೂರಿನಿಂದ ಮಲ್ಪೆ ಬಂದರಿಗೆ ಮೀನಿನ ವ್ಯಾಪಾರಕ್ಕೆ ಬಂದಿದ್ದ ರಿಯಾಜ್ ಮೇಲೆ ಮುಸುಕುಧಾರಿಗಳ ತಂಡ ದಾಳಿ ನಡೆಸಿ ಮಾರಣಾಂತಿಕ ಹಲ್ಲೆ ನಡೆಸಿತ್ತು. ಬಳಿಕ ರಿಯಾಜ್ ಅವರನ್ನು ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು.
ಕೊಲೆ ಯತ್ನ ಪ್ರಕರಣವನ್ನು ಪತ್ತೆಹಚ್ಚಲು ಎಸ್ಪಿ ನಿಶಾ ಜೇಮ್ಸ್ ಅವರು ತಂಡಗಳನ್ನು ರಚಿಸಿದ್ದರು. ಆರೋಪಿಗಳ ಬೆನ್ನುಬಿದ್ದಿದ್ದ ತಂಡ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.