ಉಡುಪಿ: ಜಿಲ್ಲಾ ಭಾರತೀಯ ಕಿಸಾನ್ ಸಂಘದ ಮಾರ್ಗದರ್ಶನದಲ್ಲಿ ಪ್ರಾರಂಭವಾದ ಉಡುಪಿ ಕಲ್ಪರಸ ಕೋಕೊನಟ್ ಹಾಗೂ ಆಲ್ ಸ್ಪೈಸಸ್ ಪ್ರೂಡ್ಯುಸರ್ ಕಂಪೆನಿ ಲಿಮಿಟೆಡ್ಗೆ (ಉಕಾಸ) ರಾಷ್ಟ್ರಮಟ್ಟದ ಅತ್ಯುತ್ತಮ ರೈತ ಉತ್ಪಾದಕ ಸಂಸ್ಥೆ ಪ್ರಶಸ್ತಿ ಲಭಿಸಿದೆ.
ಸೆ.14ರಂದು ದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ನ ಸಭಾಂಗಣದಲ್ಲಿ ನಡೆದ ಅಗ್ರಿಟೆಕ್ ಶೃಂಗಸಭೆ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ‘ಉಕಾಸ‘ ಸಂಸ್ಥೆಯ ಅಧ್ಯಕ್ಷ ಸತ್ಯನಾರಾಯಣ ಉಡುಪ ಜಪ್ತಿ ಅವರಿಗೆ ಅತ್ಯುತ್ತಮ ರೈತ ಉತ್ಪಾದಕ ಸಂಸ್ಥೆ ಪ್ರಶಸ್ತಿ ಪ್ರಧಾನ ಮಾಡಿದರು.
ಕೃಷಿಕರ ಆದಾಯ ಹೆಚ್ಚಿಸುವುದರ ಜೊತೆಗೆ ಉದ್ಯೋಗ ಸೃಷ್ಟಿಸಲು ಹಾಗೂ ಸಮಾಜಕ್ಕೆ ಆರೋಗ್ಯದಾಯಕ ಉತ್ಪನ್ನ ನೀಡುವ ಚಿಂತನೆಯೊಂದಿಗೆ ವಿನೂತನ ಉತ್ಪನ್ನವಾದ ಕಲ್ಪರಸ ಹಾಗೂ ಅದರ ಉಪ ಉತ್ಪನ್ನಗಳನ್ನು ಉತ್ಪಾದಿಸಿ ಮಾರಾಟ ಮಾಡುವ ಕಾರ್ಯದಲ್ಲಿ ಉಕಾಸ ಸಂಸ್ಥೆತೊಡಗಿಸಿಕೊಂಡಿದೆ.
ತೆಂಗು ಬೆಳೆಗಾರರ ಹಿತಕಾಯುವ ಹಾಗೂ ತೆಂಗಿನ ಉತ್ಪನ್ನಗಳ ಮೌಲ್ಯವರ್ಧನೆ ದೃಷ್ಟಿಯಿಂದ ಉಕಾಸ ಸಂಸ್ಥೆಯು ಕಲ್ಪರಸ ಹಾಗೂ ಉಪ ಉತ್ಪನ್ನಗಳನ್ನು ಉತ್ಪಾದನೆ ಮಾಡುತ್ತಿದೆ. 2019ರಲ್ಲಿ ಕಾಸರಗೋಡಿನ ಸಿಪಿಸಿಆರ್ಐ ಸಂಸ್ಥೆಯಿಂದ ಕಲ್ಪರಸ ತಂತ್ರಜ್ಞಾನವನ್ನು ಖರೀದಿಸಲಾಗಿದ್ದು ಅಬಕಾರಿ ಇಲಾಖೆಯಿಂದ ಪರವಾನಗಿ ಪಡೆದು ಕಾರ್ಯಾಚರಿಸುತ್ತಿದೆ.
ಸಾವಿರಾರು ರೈತರು ಉಕಾಸ ಸಂಸ್ಥೆಗೆ ಷೇರುದಾರರಾಗಿದ್ದು ಅವರ ತೆಂಗಿನ ಮರಗಳಿಂದ ಕಲ್ಪರಸವನ್ನು ಇಳಿಸಿ ಸಂಸ್ಥೆಯು ಹಣ ಪಾವತಿ ಮಾಡುತ್ತದೆ. ಕಲ್ಪರಸ ತೆಗೆಯಲು ಸಂಸ್ಥೆಯು ಹಲವರಿಗೆ ತರಬೇತಿಯನ್ನೂ ನೀಡಿದೆ. ಒಂದು ತೆಂಗಿನ ಮರದಿಂದ ಪ್ರತಿದಿನ 2 ಲೀಟರ್ನಷ್ಟು ಕಲ್ಪರಸ ಸಿಗಲಿದ್ದು, ವರ್ಷಕ್ಕೆ ಕನಿಷ್ಠ 600 ಲೀಟರ್ ಉತ್ಪಾದಿಸಬಹುದಾಗಿದ್ದು ವರ್ಷಕ್ಕೆ ₹ 1 ಲಕ್ಷ ಆದಾಯಗಳಿಸಬಹುದು.
ಉಡುಪಿ ಜಿಲ್ಲಾ ಪಂಚಾಯಿತಿ, ತೋಟಗಾರಿಕಾ ಇಲಾಖೆ ಹಾಗೂ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮಾರ್ಗದರ್ಶನದಲ್ಲಿ ಸಾಧನೆ ಸಾದ್ಯವಾಗಿದ್ದು, ಕೃಷಿ ವಿಜ್ಞಾನ ಕೇಂದ್ರದ ಪ್ರಶಸ್ತಿಗೆ ಸಂಸ್ಥೆಯನ್ನು ನೋಂದಣಿ ಮಾಡಿತ್ತು. ರಾಷ್ಟ್ರಮಟ್ಟದಲ್ಲಿ ‘ಉಕಾಸ’ ಸಂಸ್ಥೆಯನ್ನು ಗುರುತಿಸಿ, ಪ್ರಶಸ್ತಿ ನೀಡಿರುವುದು ಈ ಭಾಗದ ತೆಂಗು ಬೆಳೆಗಾರರಲ್ಲಿ ಹೆಚ್ಚಿನ ಹುಮ್ಮಸ್ಸ ತುಂಬಿದಂತಾಗಿದೆ. ಮುಂದೆ ಕಲ್ಪರಸ ಹಾಗೂ ಅದರ ಉಪ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಕೂಡ ಲಭಿಸಲಿದೆ ಎಂದು ಕಂಪೆನಿ ತಿಳಿಸಿದೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.