ಉಡುಪಿ: ಗನ್ ಜತೆ ರೊಮಾನ್ಸ್ ಮಾಡುವ ಮಾವೋವಾದಿಗಳು ಹಾಗೂ ನಕ್ಸಲರಿಗೆ ದೇಶದ ಅಭಿವೃದ್ಧಿ ಬಗ್ಗೆ ಯಾವುದೇ ಬದ್ಧತೆ ಇಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆ ರಾಜ್ಯ ಸಚಿವ ಡಾ.ಸತ್ಯಪಾಲ್ ಸಿಂಗ್ ವಾಗ್ದಾಳಿ ನಡೆಸಿದರು.
ಗುರುವಾರ ಮಣಿಪಾಲದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಮ್ಮದು ನಕ್ಸಲ್ವಾದಕ್ಕೆ ವಿರುದ್ಧವಾಗಿರುವ ಅಭಿವೃದ್ಧಿಯ ವಾದ. ನಕ್ಸಲೀಯರು ಮುಗ್ಧ ಜನರ ತಲೆ ಕೆಡಿಸಿ, ಮಾವೋ ಸಿದ್ಧಾಂತಗಳನ್ನು ಹಬ್ಬಿಸಿ ಹಿಂಸೆಯನ್ನು ಹೆಚ್ಚಿಸುತ್ತಿದ್ದಾರೆ. ಧನಾತ್ಮಕವಾದ ಅಭಿವೃದ್ಧಿಯ ಪರವಾಗಿ ನಕ್ಸಲರು ಮುಖ್ಯವಾಹಿನಿಗೆ ಬರಬೇಕು. ಅದಕ್ಕೆ ಸ್ವಾಗತವಿದೆ ಎಂದು ಹೇಳಿದರು.
ಉತ್ತರ ಪ್ರದೇಶದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಗಂಗಾನದಿ ಶುದ್ಧೀಕರಣ ಕಾರ್ಯ ಭರದಿಂದ ಸಾಗಿದೆ. ಮುಂದಿನ ಜನವರಿಯೊಳಗೆ ಯೋಜನೆ ಶೇ 80ರಷ್ಟು ಪೂರ್ಣವಾಗಲಿದೆ. ಶೀಘ್ರವೇ ಗಂಗೆ ಶುದ್ಧವಾಗಲಿದೆ ಎಂದರು.
ಫೆಬ್ರವರಿಯಲ್ಲಿ ಕುಂಭಮೇಳ ನಡೆಯುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಂತೆ ಗಂಗಾ ನೈರ್ಮಲ್ಯಕ್ಕೆ ಗಂಗಾನದಿ ಹರಿಯುವ ಇತರ ರಾಜ್ಯಗಳ ಮುಖ್ಯಮಂತ್ರಿಗಳೂ ಬದ್ಧತೆ ತೋರಿಸಬೇಕು. ಯೋಜನೆಗೆ ಹಣಕಾಸು ಸಮಸ್ಯೆ ಇಲ್ಲ. ಅಗತ್ಯ ಅನುದಾನ ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.