ADVERTISEMENT

ಉಡುಪಿ: ಕಳೆಗಟ್ಟಿದ ತೆನೆಹಬ್ಬದ ಸಂಭ್ರಮ

ಮೊಂತಿ ಫೆಸ್ತ್ ಆಚರಣೆ, ಭತ್ತದ ತೆನೆಗಳಿಗೆ ಪೂಜೆ, ವಿಶೇಷ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2018, 14:13 IST
Last Updated 8 ಸೆಪ್ಟೆಂಬರ್ 2018, 14:13 IST
ಮೊಂತಿ ಫೆಸ್ತ್ (ತೆನೆಹಬ್ಬ) ಅಂಗವಾಗಿ ಶನಿವಾರ ಚರ್ಚ್‌ನ ಧರ್ಮಗುರುಗು ಆಶೀರ್ವಚನ ನೀಡಿದರು.
ಮೊಂತಿ ಫೆಸ್ತ್ (ತೆನೆಹಬ್ಬ) ಅಂಗವಾಗಿ ಶನಿವಾರ ಚರ್ಚ್‌ನ ಧರ್ಮಗುರುಗು ಆಶೀರ್ವಚನ ನೀಡಿದರು.   

ಉಡುಪಿ: ಕನ್ಯಾ ಮರಿಯಮ್ಮ ಅವರ ಜನ್ಮದಿನದ ಅಂಗವಾಗಿ ಶನಿವಾರ ಜಿಲ್ಲೆಯಾದ್ಯಂತ ಮೊಂತಿ ಫೆಸ್ತ್ (ತೆನೆಹಬ್ಬ) ಸಂಭ್ರಮ ಕಳೆಗಟ್ಟಿತ್ತು. ಕ್ರೈಸ್ತರು ಭಕ್ತಿ–ಭಾವದಿಂದ ಹಬ್ಬವನ್ನು ಆಚರಿಸಿದರು.

ತೆನೆ ಹಬ್ಬದ ಪ್ರಯುಕ್ತ ಪಾಂಗಳದ ಶಂಕರಪುರದ ಸಂತ ಯೋಹಾನ್ನರ ದೇವಾಲಯದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಉಡುಪಿ ಧರ್ಮಾಧ್ಯಕ್ಷರಾದ ಜೆರಾಲ್ಡ್ ಲೋಬೊ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

ಚರ್ಚ್‌ನ ಪ್ರಧಾನ ಧರ್ಮಗುರು ಫರ್ಡಿನಂಡ್ ಗೊನ್ಸಾಲ್ವಿಸ್, ಸಹಾಯಕ ಧರ್ಮಗುರು ರೋಯ್ಸನ್ ಫೆರ್ನಾಂಡಿಸ್, ರೋಮಿಯೊ ಲೂವಿಸ್, ಲೋರೆನ್ಸ್ ಮೆಂಡೋನ್ಸ, ಜಿತೇಶ್ ಕ್ಯಾಸ್ತೆಲಿನೊ ಈ ಸಂದರ್ಭ ಉಪಸ್ಥಿತರಿದ್ದರು.

ADVERTISEMENT

ಉಡುಪಿ ಶೋಕ ಮಾತಾ ಇಗರ್ಜಿಯಲ್ಲಿ ಚರ್ಚ್‌ನ ಪ್ರಧಾನ ಧರ್ಮಗುರು ವಲೇರಿಯನ್ ಮೆಂಡೊನ್ಸಾ ಹೊಸ ತೆನೆಗಳನ್ನು ಆಶೀರ್ವವಚಿಸಿ ಹಬ್ಬದ ಸಂದೇಶವನ್ನು ನೀಡಿದರು. ಈ ವೇಳೆ ಸಹಾಯಕ ಧರ್ಮಗುರು ವಿಜಯ್ ಡಿಸೋಜಾ, ಹಾಗೂ ವಂ ವಿಲಿಯಂ ಮಾರ್ಟಿಸ್ ಉಪಸ್ಥಿತರಿದ್ದರು.

ಮಕ್ಕಳು ಕನ್ಯಾ ಮರಿಯಮ್ಮನವರ ಪ್ರತಿಮೆಗೆ ಹೂಗಳನ್ನು ಸಮರ್ಪಿಸಿದ ಬಳಿಕ ಜಿಲ್ಲೆಯ ಎಲ್ಲ ಚರ್ಚುಗಳಲ್ಲಿ ಧರ್ಮಗುರುಗಳು ಆಯಾ ಊರಿನ ಗುರಿಕಾರರು ಹೊಲಗಳಿಂದ ಆರಿಸಿ ತಂದ ಭತ್ತದ ತೆನೆಯನ್ನು ಆಶೀರ್ವದಿಸಿದರು. ಬಳಿಕ ಮೆರವಣಿಗೆಯ ಮೂಲಕ ತೆನೆಗಳನ್ನು ಚರ್ಚಿನ ಒಳಗೆ ಕೊಂಡೊಯ್ದು ಪವಿತ್ರ ಬಲಿಪೂಜೆ ನಡೆಸಲಾಯಿತು.

ಧರ್ಮಗುರುಗಳು ಕುಟುಂಬ ಜೀವನ ಹಾಗೂ ಮಹಿಳೆಯ ಸ್ಥಾನಮಾನದ ಕುರಿತು ಪ್ರವಚನ ನೀಡಿದರು. ಈ ಬಾರಿ ಕೊಡಗು ಮತ್ತು ಕೇರಳದಲ್ಲಿ ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ದೇವರು ಒಳಿತನ್ನು ಮಾಡುವಂತೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಬಲಿಪೂಜೆ ಬಳಿಕ ಧರ್ಮಗುರುಗಳು ಪ್ರತಿ ಕುಟುಂಬಕ್ಕೆ ಆಶೀರ್ವದಿಸಿದ ಹೊಸ ಭತ್ತದ ತೆನೆಗಳನ್ನು ನೀಡಿ ಹರಸಿದರು. ಮಕ್ಕಳಿಗೆ ಸಿಹಿ ತಿಂಡಿ, ಕಬ್ಬುಗಳನ್ನು ವಿತರಿಸಲಾಯಿತು.

ಕುಟುಂಬದ ಹಿರಿಯರು ಭತ್ತದ ತೆನೆಯನ್ನು ಮನೆಗೆ ತಂದು ದೇವರ ಪೀಠದ ಮೇಲಿಟ್ಟು ಪ್ರಾರ್ಥನೆ ಸಲ್ಲಿಸಿ, ತೆನೆಗಳನ್ನು ಸುಲಿದು ಪಾಯಸ ಮಾಡಿ ಕುಟುಂಬದ ಸದಸ್ಯರೊಂದಿಗೆ ಸವಿದರು. ಬಳಿಕ ಸಂರ್ಪೂಣ ಸಸ್ಯಹಾರದ ಭೋಜನವನ್ನು ತಯಾರಿಸಿ ಸವಿಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.