ಕಾರ್ಕಳ: ತಾಲ್ಲೂಕಿನ ಮುಂಡ್ಲಿ ಜಲ ವಿದ್ಯುತ್ ಸ್ಥಾವರದಲ್ಲಿ ನಿರ್ಮಾಣ ಹಂತದಲ್ಲಿರುವ ಹೈಡ್ರಾಲಿಕ್ ಗೇಟ್ ಅಳವಡಿಕೆ ಕಾರ್ಯವನ್ನು ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಅವರು ಅಧಿಕಾರಿಗಳ ಜತೆಗೆ ಭೇಟಿ ನೀಡಿ ಕಾಮಗಾರಿ ಸ್ಥಗಿತಗೊಳಿಸುವಂತೆ ಕಂಪನಿ ಅಧಿಕಾರಿಗಳಿಗೆ ಪುರಸಭೆ ಮುಖ್ಯಾಧಿಕಾರಿ ರೂಪಾ ಅವರು ಸೂಚನೆ ನೀಡಿದರು.
ತಾಲ್ಲೂಕಿನ ದುರ್ಗಾ ಗ್ರಾಮ ಪಂಚಾಯಿತಿಯು ಪುರಸಭೆಗೆ ನೀಡಿದ ದೂರಿನ ಮೇರೆಗೆ ಪುರಸಭಾ ಅಧ್ಯಕ್ಷೆ ಸುಮಾಕೇಶವ್ ಅವರೊಂದಿಗೆ ಸ್ಥಾವರದ ಸ್ಥಳಕ್ಕೆ ಭೇಟಿ ನೀಡಿದ ಪುರಸಭೆ ಮುಖ್ಯಾಧಿಕಾರಿ ಅವರು, ಕಾನೂನು ಮೀರಿ ಕಾಮಗಾರಿ ನಡೆಸುತ್ತಿರುವ ಕುರಿತು ಜೆ.ವಿ.ಆರ್. ಕಂಪನಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ದುರ್ಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ನಾಯಕ್, ಶಿರ್ಲಾಲು ಪಂಚಾಯಿತಿ ಅಧ್ಯಕ್ಷ ರಮಾನಂದ ಪೂಜಾರಿ, ಪುರಸಭಾ ಎಂಜಿನಿಯರ್ ಸೋಮಶೇಖರ್, ಪುರಸಭಾ ಸದಸ್ಯರಾದ ಯೋಗಿಶ್ ದೇವಾಡಿಗ, ಸಾಮಾಜಿಕ ಕಾರ್ಯಕರ್ತ ರಾಜೇಂದ್ರ ಕುಮಾರ್ ಇದ್ದರು.
ಮುಂಡ್ಲಿ ಗ್ರಾಮದ ಸ್ವರ್ಣಾ ನದಿಗೆ ಅಡ್ಡಲಾಗಿ ಜೆವಿಆರ್ ಪವರ್ ಪ್ರಾಜೆಕ್ಟ್ ಕಂಪನಿ ಆಣೆಕಟ್ಟು ನಿರ್ಮಿಸಿ ಜಲವಿದ್ಯುತ್ ಸ್ಥಾವರ ನಡೆಸುತ್ತಿದ್ದಾರೆ. ಇದರ ಪರವಾನಗಿಯು ನವೀಕರ ಣವಾಗದೇ 2 ವರ್ಷ ಆಗಿದೆ. ಪರವಾನಗಿ ಅವಧಿ ಮುಗಿದರೂ ಜಿಲ್ಲಾಧಿಕಾರಿ ಅನುಮತಿ ಪತ್ರವಿದೆ ಎಂದು ಹೇಳಿ ಸ್ಥಳೀಯ ಜನರಿಗೆ ಹಾಗೂ ಜನಪ್ರತಿನಿಧಿಗಳಿಗೆ ಸುಳ್ಳು ಮಾಹಿತಿ ನೀಡಿ ಕಂಪನಿ ವಂಚಿಸುತ್ತಿದೆ. ಪ್ರತೀ ವರ್ಷವೂ ಕಂಪನಿಯಿಂದಾಗಿ ಈ ಭಾಗದ 12 ಮನೆಗಳಿಗೆ ಹಾಗೂ ಕೃಷಿ ಭೂಮಿಗೆ ತೊಂದರೆಯಾಗುತ್ತಿದೆ. ಅವರಿಗೆ ಸಮರ್ಪಕ ಪರಿಹಾರ ನೀಡದೆ ವಂಚಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದರು,
ಮಾಹಿತಿಯ ಹಕ್ಕಿನಡಿ ಬಹಿರಂಗ: ಸಾಮಾಜಿಕ ಕಾರ್ಯಕರ್ತರೊಬ್ಬರು ಮಾಹಿತಿ ಹಕ್ಕಿನಡಿ ಶಿರ್ಲಾಲು, ದುರ್ಗಾ ಪಂಚಾಯಿತಿ ಹಾಗೂ ಪುರಸಭೆಗೆ ಮಾಹಿತಿ ಹಕ್ಕಿನ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾಗ ಕಂಪನಿ ಪರವಾನಗಿ ಅವಧಿ ಮುಗಿದಿರುವುದು ಬಹಿರಂಗವಾಗಿದೆ. ಕಂಪನಿಗೆ ಸಂಬಂಧಪಟ್ಟ ಕಟ್ಟಡ ಶಿರ್ಲಾಲು ಗ್ರಾಮದ ವ್ಯಾಪ್ತಿಗೆ ಒಳಪಟ್ಟಿದ್ದು ಕಟ್ಟಡಕ್ಕೆ ಪರವಾನಗಿ ಪಡೆದಿಲ್ಲ. ಆದ್ದರಿಂದ ಗ್ರಾಮಸ್ಥರೆಲ್ಲ ಒಗ್ಗಟ್ಟಿನಿಂದ ಹೋರಾಡಿ ಕಂಪನಿ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ ಎಂದು ದುರ್ಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ನಾಯಕ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.