ಉಡುಪಿ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಆನ್ಲೈನ್ನಲ್ಲಿ ಹಣ ವಂಚನೆ ಮಾಡಿರುವ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿ ಉಡುಪಿಯ ಸೆನ್ ಅಪರಾಧ ಠಾಣೆಯ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.
ಪೆರಂಪಳ್ಳಿಯ ತೀರ್ಥರಾಜ ಶೆಣೈ ಎಂಬುವವರನ್ನು ಅಪರಿಚಿತ ವ್ಯಕ್ತಿಯು ಟೆಲಿಗ್ರಾಮ್ ಗ್ರೂಪ್ಗೆ ಸೇರಿಸಿದ್ದು, ಅದರಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಆಮಿಷವೊಡ್ಡಲಾಗಿತ್ತು.
ಅದನ್ನು ನಂಬಿದ ತೀರ್ಥರಾಜ ಅವರು ಹಂತ ಹಂತವಾಗಿ ಒಟ್ಟು ₹ 44 ಲಕ್ಷ ಹೂಡಿಕೆ ಮಾಡಿದ್ದಾರೆ. ಬಳಿಕ ಹಣ ನೀಡದೆ ವಂಚಿಸಿರುವಾಗಿ ತೀರ್ಥರಾಜ ಅವರು ಸೆನ್ ಅಪರಾಧ ಠಾಣೆಗೆ ದೂರು ನೀಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ಮೈಸೂರು ಜಿಲ್ಲೆಯ ಹುಣಸೂರಿನ ಶೋಯಬ್ ಅಹಮದ್ (28) ಮತ್ತು ಮುದ್ದಾಸಿರ್ ಅಹಮದ್(40) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ₹2 ಲಕ್ಷ ನಗದು ಹಾಗೂ ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಕಾಪು ತಾಲ್ಲೂಕಿನ ಶಂಕರಪುರದ ಜೊಸ್ಸಿ ರವೀಂದ್ರ ಡಿಕ್ರೂಸ್ ಎಂಬುವವರಿಗೆ ಮೋಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಸುರತ್ಕಲ್ನ ಮೊಹಮದ್ ಕೈಸ್ (20), ಹೆಜಮಾಡಿ ಮಂಜತೋಟದ ಅಹಮದ್ ಅನ್ವೀಜ್(20), ಬಂಟ್ವಾಳದ ಮೂಡ ಗ್ರಾಮದ ಸಪ್ವಾನ್(30), ತಾಸೀರ್(31) ಬಂಧಿತ ಆರೋಪಿಗಳು. ಇವರಿಂದ ₹ 4 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಇತರ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೊಸ್ಸಿ ಅವರಿಗೆ ಫೇಸ್ಬುಕ್ನಲ್ಲಿ ಅರೋಹಿ ಅಗರ್ವಾಲ್ ಎಂಬ ಮಹಿಳೆಯ ಪರಿಚಯವಾಗಿದ್ದು, ಆಕೆ ವಾಟ್ಸ್ಆ್ಯಪ್ನಲ್ಲಿ ಮೆಸೇಜ್ ಮಾಡಿ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿದ್ದಳು. ಅದನ್ನು ನಂಬಿದ ಜೊಸ್ಸಿ ಅವರು ಹಂತ ಹಂತವಾಗಿ ಒಟ್ಟು ₹ 75 ಲಕ್ಷ ಹೂಡಿಕೆ ಮಾಡಿದ್ದರು. ಬಳಿಕ ಹೂಡಿಕೆ ಮಾಡಿದ ಹಣವ್ನಾಗಲಿ, ಲಾಭಾಂಶವನ್ನಾಗಲಿ ನೀಡದೆ ವಂಚಿಸಲಾಗಿದೆ ಎಂದು ದೂರು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.