ಪಡುಬಿದ್ರಿ: ಪಡುಬಿದ್ರಿ ಬೀಚ್ ಸಮುದ್ರ ಕೊರೆತ ತಡೆಯ ಕಾಮಗಾರಿ ಬ್ಯಾನರ್ ರಾಜಕೀಯಕ್ಕೆ ಕಾರಣವಾಗಿದೆ. ಇಲ್ಲಿನ ಬೀಚ್ ಕಡಲ ತೀರದಲ್ಲಿ ಸಮುದ್ರ ಕೊರೆತ ದೀರ್ಘ ಕಾಲಿಕ ಪ್ರತಿಬಂಧ ಸಂರಕ್ಷಣಾ ಕಾಮಗಾರಿಗೆ ₹ 2 ಕೋಟಿ ವೆಚ್ಚದಲ್ಲಿ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರತಿದೆ. ಒಂದೆಡೆ ಪಡುಬಿದ್ರಿ ಗ್ರಾಮ ಪಂಚಾಯಿತಿ ಹೆಸರಿನಲ್ಲಿ ಅನುದಾನ ಒದಗಿಸಿಕೊಟ್ಟ ಶಾಸಕರಿಗೆ ಅಭಿನಂದನೆ ಕೋರಿ ಫೋಟೋ ಬಳಸಿ ಬ್ಯಾನರ್ ಅಳವಡಿಸಿದ್ದಾರೆ.
ಅಭಿನಂದನೆ ಸಲ್ಲಿಸಿರುವುದಕ್ಕೆ ಅಸಮಾಧಾನಗೊಂಡಿರುವ ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಪಕ್ಕದಲ್ಲೇ ಇನ್ನೊಂದು ಬ್ಯಾನರ್ ಅಳವಡಿಸಿ ಸಚಿವ ಮಂಕಾಳ ವೈದ್ಯ ಹಾಗೂ ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರ ಫೋಟೊ ಹಾಕಿ ಅಭಿನಂದನೆಗಳ ಸಲ್ಲಿಸಸಿದ್ದಾರೆ.
ಎರಡು ವರ್ಷಗಳ ಹಿಂದೆ ಪಡುಬಿದ್ರಿ ಮುಖ್ಯಬೀಚ್ ಕಡಲ್ಕೊರೆತದಿಂದ ಸಂಪೂರ್ಣ ಹಾನಿಯಾಗಿತ್ತು. ಈ ವೇಳೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಉಡುಪಿ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಬೀಚ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮೀನುಗಾರಿಕಾ ಮತ್ತು ಬಂದರು ಸಚಿವರಾದ ಮಾಂಕಾಳ ವೈದ್ಯ ಅವರು ಈ ಬಗ್ಗೆ ಅನುದಾನ ದೊರಕಿಸಿಕೊಡುವ ಭರವಸೆ ನೀಡಿ ಅನುದಾದ ದೊರಕಿಸಿಕೊಟ್ಟಿದ್ದಾರೆ. ಆದರೆ ಗ್ರಾಮ ಪಂಚಾಯಿತಿಯು ಸಚಿವರ ಹೆಸರು ಮತ್ತು ಪೋಟೋ ಬಳಸದೆ ಕೇವಲ ಶಾಸಕರ ಹೆಸರನ್ನು ನಮೂದಿಸಿ ಅಭಿನಂದನೆ ಸಲ್ಲಿಸಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡ ಅಶೋಕ್ ಸಾಲ್ಯಾನ್ ತಿಳಿಸಿದ್ದಾರೆ.
ಕಳೆದ ವರ್ಷ ತೀವ್ರ ಹಾನಿಗೊಳಗಾದ ಬೀಚ್ ಪ್ರದೇಶದಲ್ಲಿ ಶಾಸಕರ ಮುತವರ್ಜಿಯಿಂದ ಅನುಮೋದನೆಗೊಂಡ ₹ 2 ಕೋಟಿಯ ಕಾಮಗಾರಿಗೆ ಚಾಲನೆ ದೊರಕಿದೆ. ಇದಕ್ಕೆ ಅಭಿನಂದನೆ ಸಲ್ಲಿಸಿ ಗ್ರಾಮ ಪಂಚಾಯಿತಿ ಬ್ಯಾನರ್ ಅಳವಡಿಸಿರುವುದು ಸರಿಯಾಗಿದೆ. ಆದರೆ ಗ್ರಾಮೀಣ ಕಾಂಗ್ರೆಸ್ ಪಕ್ಷವು ಸಚಿವರ ಫೋಟೊದೊಂದಿಗೆ ಮಾಜಿ ಸಚಿವರ ಫೋಟೊ ಹಾಕಿರುವುದು ಸರಿಯಲ್ಲ ಎಂದು ಬಿಜೆಪಿ ಮುಖಂಡ ಶಶಿಕಾಂತ್ ಪಡುಬಿದ್ರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.