ADVERTISEMENT

ಉಡುಪಿ | ಸಂಶೋಧನಾ ಕೇಂದ್ರಕ್ಕೆ ಹೆಚ್ಚಿನ ಸೌಲಭ್ಯ: ಸಚಿವ ಎಂ.ಸಿ. ಸುಧಾಕರ್

ಬೆಳಪು ಸಂಶೋಧನಾ ಕೇಂದ್ರದ ಕಾಮಗಾರಿ ಪರಿಶೀಲಿಸಿದ ಸಚಿವ ಎಂ.ಸಿ. ಸುಧಾಕರ್

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 6:23 IST
Last Updated 19 ಅಕ್ಟೋಬರ್ 2025, 6:23 IST
ಮಂಗಳೂರು ವಿಶ್ವವಿದ್ಯಾನಿಲಯದ ಮೂಲಕವಾಗಿ ಅನುಷ್ಠಾನಗೊಳ್ಳುತ್ತಿರುವ ಉಡುಪಿ ಜಿಲ್ಲೆ ಕಾಪು ತಾಲೂಕಿನ ಬೆಳಪು ಗ್ರಾಮದ ಸಂಶೋಧನಾ ಕೇಂದ್ರ ಕಟ್ಟಡ ಕಾಮಗಾರಿಗಳನ್ನು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ವೀಕ್ಷಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಮೂಲಕವಾಗಿ ಅನುಷ್ಠಾನಗೊಳ್ಳುತ್ತಿರುವ ಉಡುಪಿ ಜಿಲ್ಲೆ ಕಾಪು ತಾಲೂಕಿನ ಬೆಳಪು ಗ್ರಾಮದ ಸಂಶೋಧನಾ ಕೇಂದ್ರ ಕಟ್ಟಡ ಕಾಮಗಾರಿಗಳನ್ನು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ವೀಕ್ಷಿಸಿದರು.   

ಪಡುಬಿದ್ರಿ: ಇಲ್ಲಿನ ಬೆಳಪುವಿನಲ್ಲಿ ನಿರ್ಮಾಣಗೊಂಡಿರುವ ಮಂಗಳೂರು ವಿಶ್ವವಿದ್ಯಾನಿಲಯದ ಕಟ್ಟಡದಲ್ಲಿ ಸ್ನಾತಕೋತ್ತರ ಕೇಂದ್ರವನ್ನು ಪ್ರಾರಂಭಿಸಿ, ಅದರೊಂದಿಗೆ ಗಾಂಧಿ ಸಂಶೋಧನಾ ಕೇಂದ್ರ ಜೋಡಣೆ ಮಾಡಿಕೊಂಡು ಅಡ್ವಾನ್ಸ್ ರಿಸರ್ಚ್ ಸೆಂಟರ್‌ಗೆ ಸಮಾನಾಂತರವಾಗಿ ಸೌಲಭ್ಯ ಕಲ್ಪಿಸಲು ಪ್ರಯತ್ನ ನಡೆಸುವುದಾಗಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಮೂಲಕವಾಗಿ ಅನುಷ್ಠಾನಗೊಳ್ಳುತ್ತಿರುವ  ಕಾಪು ತಾಲ್ಲೂಕಿನ ಬೆಳಪು ಗ್ರಾಮದ ಸಂಶೋಧನಾ ಕೇಂದ್ರದ ಕಟ್ಟಡ ಕಾಮಗಾರಿಗಳನ್ನು ಶನಿವಾರ ವೀಕ್ಷಿಸಿ, ಬಳಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಾರಂಭದಲ್ಲಿ ಸ್ನಾತಕೋತ್ತರ ಕೇಂದ್ರವನ್ನು ತೆರೆಯಬೇಕು. ಅತಿಥಿ ಉಪನ್ಯಾಸಕರು, ತರಬೇತುದಾರರನ್ನು ವಿ.ವಿ. ಸ್ವಂತ ಸಂಪನ್ಮೂಲದಲ್ಲಿ ನೇಮಿಸಿದರೂ ಹಣಕಾಸು ಇಲಾಖೆ ಅನುಮೋದನೆ ಪಡೆಯಬೇಕಾಗುತ್ತದೆ. ವಿ.ವಿ.ಯ ಬೇರೆ ಕಾಮಗಾರಿಗೆ ಬಳಸಿದ ಮೊತ್ತ ಹೊರತುಪಡಿಸಿ ಅಗತ್ಯವಿರುವ ₹17 ಕೋಟಿ ಜೊತೆಗೆ ಹೆಚ್ಚುವರಿಯಾಗಿ ನೀಡಲಾಗುವುದು. ಅದಕ್ಕೆ ಬೇಕಾದ ಸಹಕಾರವನ್ನು ನೀಡುವುದಾಗಿ ಸಚಿವರು ಭರವಸೆ ನೀಡಿದರು.

ADVERTISEMENT

ಕೇಂದ್ರದ ಹಿಂದಿನ ರೂಸಾ ಯೋಜನೆಗೆ ಬದಲಾಗಿ ಅದೇ ಮಾದರಿಯಲ್ಲಿ ಪಿಎಂ ಉಷಾ ಯೋಜನೆಯಡಿ ಸಂಶೋಧನಾ ಕೇಂದ್ರಗಳಿಗೆ ಅವಕಾಶಗಳಿವೆ. ಕೇಂದ್ರ ರಾಜ್ಯದ 60-40 ಅನುಪಾತದಲ್ಲಿ ಯೋಜನೆ ಕಾರ್ಯಗತ ಮಾಡಲು ಅವಕಾಶಗಳಿದ್ದು, ಅದರ ಪ್ರಯತ್ನವೂ ನಡೆಯಲಿ ಎಂದರು.

ಆರ್ಥಿಕ ಹೊರೆ: ಹಿಂದಿನ ಕುಲಪತಿ ಮಾಡಿರುವ ಸಂಪನ್ಮೂಲದ ಸದ್ಬಳಕೆ ಪ್ರಮಾದದಿಂದ ಮಂಗಳೂರು ವಿಶ್ವವಿದ್ಯಾನಿಲಯ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೋಟ್ಯಂತರ ರೂಪಾಯಿ ವ್ಯಯಿಸಿ ಸಲಕರಣೆಗಳನ್ನು ಜೋಡಿಸಿ, ಇಲ್ಲಿ ದೊಡ್ಡ ಮಟ್ಟದ ಸಂಶೋಧನಾ ಕೇಂದ್ರ ರೂಪಿಸುವುದು ಕಷ್ಟ ಸಾಧ್ಯವಾಗಿದೆ ಎಂದು ಹೇಳಿದರು.

ವಿಶ್ವ ವಿದ್ಯಾನಿಲಯಗಳನ್ನು ಪ್ರತ್ಯೇಕಿಸುವ ವೇಳೆ ಕೇವಲ ಆಸ್ತಿಯನ್ನು ಬೇರ್ಪಡಿಸಿದ್ದಾರೆ ವಿನಃ, ಪಿಂಚಣಿ ಹೊರೆಯನ್ನು ವಿಭಜಿಸದೆ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಈ ಸಮಸ್ಯೆಗಳ ಪರಿಹಾರಕ್ಕಾಗಿ ಮುಖ್ಯಮಂತ್ರಿಯವರು ಉಪಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದ್ದು, ಈಗಾಗಲೇ ಬಹಳಷ್ಟು ಸಮಸ್ಯೆಗಳನ್ನು ಅಧ್ಯಯನ ಮಾಡಲಾಗಿದೆ ಎಂದರು.

ಏನೆಲ್ಲಾ ತೀರ್ಮಾನ ಮಾಡಬೇಕು, ಪಿಂಚಣಿ ಸಮಸ್ಯೆಗೆ ಯಾವ ರೀತಿ ಪರಿಹಾರ ಕೊಡಬೇಕು, ಸಂಪನ್ಮೂಲಗಳನ್ನು ಹೆಚ್ಚು ಮಾಡುವ ಸಲುವಾಗಿ ಆರ್ಥಿಕ ಶಿಸ್ತು ಕ್ರಮಗಳನ್ನು ವಿ.ವಿ. ಆಡಳಿತದಲ್ಲಿ ತರಲು ಸಮಿತಿ ತೀರ್ಮಾನಿಸಿದೆ. ಅವಶ್ಯಕತೆ ಮೀರಿ ಸಿಬ್ಬಂದಿ ನೇಮಕ ಮಾಡಿರುವುದು ಮಂಗಳೂರು ವಿ.ವಿ.ಯ ಸಮಸ್ಯೆಗಳಿಗೆ ಕಾರಣವಾಗಿದೆ. ಇದು ಅಕ್ಷಮ್ಯ ಅಪರಾಧವಾಗಿದೆ ಎಂದು ಹೇಳಿದರು.

ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಬೆಳಪು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಮಂಗಳೂರು ವಿ.ವಿ. ಕುಲಪತಿ ಪ್ರೊ. ಪಿ.ಎಲ್.ಧರ್ಮ ಮಾತನಾಡಿದರು.

ರಾಜ್ಯ ಗೃಹ ಮಂಡಳಿಯ ಎಇಇ ಸಹನಾ, ಮಂಗಳೂರು ವಿ.ವಿ. ರಿಜಿಸ್ಟ್ರಾರ್ ರಾಜು ಮೊಗವೀರ, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್, ಕಾಪು ಪ್ರಭಾರ ತಹಶೀಲ್ದಾರ್ ಪ್ರದೀಪ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಪ್ರಶಾಂತ್ ಜತ್ತನ್ನ ಇದ್ದರು.

ಹಣ ಮರಳಿಸಲು ಸೂಚನೆ ಬೆಳಪುವಿನಲ್ಲಿ ಸ್ನಾತಕೋತ್ತರ ಕೇಂದ್ರಕ್ಕೆ ಬಿಡುಗಡೆಯಾದ ₹7.80 ಲಕ್ಷ ಹಣವನ್ನು ಬೇರೆ ಕೆಲಸಕ್ಕೆ ಉಪಯೋಗಿಸಿರುವುದು ಅಪರಾಧ. ಸರ್ಕಾರ ಇದನ್ನು ಒಪ್ಪಲು ಸಾಧ್ಯವಿಲ್ಲ. ಈ ಹಣವನ್ನು ಬೆಳಪುವಿನ ಕೇಂದ್ರದ ಕಾಮಗಾರಿಗೆ ಮರಳಿಸಬೇಕು. ಸರ್ಕಾರ ಅದರ ಜವಾಬ್ದಾರಿ ಹೊರಲು ಸಾಧ್ಯವಿಲ್ಲ. ವಿಶ್ವವಿದ್ಯಾಲಯವೇ ಅದರ ಜವಾಬ್ದಾರಿಯನ್ನು ಹೊರಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಕುಲಪತಿಗಳಿಗೆ ಸೂಚಿಸಿದರು. ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ ಬೆಳಪು ಕೇಂದ್ರವನ್ನು ಗಾಂಧಿ ಸಯನ್ಸ್ ರೀಸರ್ಚ್ ಸೆಂಟರ್ ಆಗಿ ಪರಿವರ್ತಿಸಬೇಕು. ಉಳಿದ ಕಾಮಗಾರಿಗೆ ತಕ್ಷಣ ಅನುದಾನ ಬಿಡುಗಡೆಗೊಳಿಸಬೇಕು ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.