ಪಡುಬಿದ್ರಿ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರ ಶಿಶುಗಳ ಪೋಷಣೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಕೂಸಿನ ಮನೆ ಯೋಜನೆಯ ಕಾಪು ತಾಲ್ಲೂಕಿನ ಏಕೈಕ ಶಿಶು ಪಾಲನಾ ಕೇಂದ್ರ ಮುಚ್ಚಿದೆ.
ಉಡುಪಿಯಲ್ಲಿ 22 ಶಿಶು ಪಾಲನಾ ಕೇಂದ್ರಗಳನ್ನು ಆರಂಭಿಸಲು ಉದ್ದೇಶಿಸಲಾಗಿತ್ತು. ನರೇಗಾ ಉದ್ಯೋಗ ಚೀಟಿ ಹೊಂದಿರುವ ಕುಟುಂಬದ 6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳಿಗೆ ಈ ಕೇಂದ್ರದಲ್ಲಿ ಆಶ್ರಯ ನೀಡುವ ಉದ್ದೇಶ ಹೊಂದಲಾಗಿತ್ತು.
ಗ್ರಾಮೀಣ ಭಾಗದಲ್ಲಿ ನರೇಗಾ ಕಾರ್ಮಿಕ ಮಹಿಳೆಯರು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸದಲ್ಲಿ ತೊಡಗಿಸಿಕೊಂಡಾಗ ಅವರ ಮಕ್ಕಳು ಪೋಷಣೆ, ಸುರಕ್ಷೆಯ ದೂರದೃಷ್ಟಿ ಈ ಯೋಜನೆಯ ಹಿಂದಿದೆ.
ಜಿಲ್ಲೆಯಲ್ಲಿ ಯೋಜನೆ ಯಶಸ್ವಿಯಾಗಿ ಮುಂದುವರಿಸುವ ನಿಟ್ಟಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಮುದಾಯ ಕೆಲಸ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರ ಶಿಶುಗಳನ್ನು ಕೇಂದ್ರದಲ್ಲಿ ವ್ಯವಸ್ಥಿತ ಪಾಲನೆ, ಪೋಷಣೆ ಮಾಡುವ ಪ್ರಯತ್ನ ಮಾಡಲಾಗಿತ್ತು.
22 ಕೇಂದ್ರಗಳ ಪೈಕಿ 14 ಕೇಂದ್ರಗಳನ್ನು ಮಾತ್ರ ತೆರೆಯಲಾಗಿತ್ತು. ಈ ಪೈಕಿ ಕಾಪು ತಾಲ್ಲೂಕಿನ ಪಡುಬಿದ್ರಿಯಲ್ಲಿ ಏಕೈಕ ಕೇಂದ್ರವನ್ನು ತೆರೆಯಲಾಗಿತ್ತು. ಪಡುಬಿದ್ರಿಯಲ್ಲಿ ತೆರೆದ ಕೂಸಿನ ಮನೆ ಆರಂಭದಿಂದಲೂ ಮಕ್ಕಳ ದಾಖಲಾತಿ ಪ್ರಮಾಣ ಕಡಿಮೆಯಾಗಿದ್ದು, ನಾಲ್ಕೇ ತಿಂಗಳಲ್ಲಿ ಕೇಂದ್ರದ ಬಾಗಿಲು ಮುಚ್ಚಿದೆ.
ಆರೈಕೆದಾರರು: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ಪಡೆದುಕೊಂಡು ಸಮುದಾಯ ಕೆಲಸ ನಿರ್ವಹಿಸುತ್ತಿರುವ ಮಹಿಳಾ ಕೂಲಿ ಕಾರ್ಮಿಕರೇ ಈ ಕೂಸಿನ ಮನೆಗೆ ಮಕ್ಕಳ ಆರೈಕೆದಾರರಾಗಿರುತ್ತಾರೆ. ಅವರಿಗೆ ಸರ್ಕಾರದಿಂದ ಪ್ರತ್ಯೇಕವಾಗಿ ಗೌರವಧನ ನೀಡದೇ ನರೇಗಾ ಯೋಜನೆಯಡಿ ಎನ್.ಎಂ.ಆರ್ ಸೃಜನೆ ಮಾಡಿ ದಿನಕ್ಕೆ ₹349 ರಂತೆ ನೂರು ದಿನಗಳವರೆಗೆ ಕೆಲಸ ನೀಡಲಾಗುತ್ತಿದೆ. ಒಂದು ವೇಳೆ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರರು 100 ದಿನ ಕೆಲಸ ನಿರ್ವಹಿಸಿದರೆ ನಂತರ ಮತ್ತೊಬ್ಬರಿಗೆ ಅವಕಾಶ ಸಿಗಲಿದೆ. ಆದರೆ, ಕೆಲ ಕೇಂದ್ರಗಳಲ್ಲಿ ಕೇರ್ ಟೇರ್ಸ್ ಕೆಲಸ ನಿರ್ವಹಿಸಲು ಕೂಲಿ ಕಾರ್ಮಿಕರೇ ಬರದೆ ಇರುವುದು ಕೇಂದ್ರ ನಿರ್ವಹಣೆ ಮಾಡುವುದೇ ಪಂಚಾಯಿತಿಗೆ ಸಂಕಷ್ಟ ತಂದೊಡ್ಡಿದೆ.
ನಿರ್ವಹಣೆ ಪಂಚಾಯಿತಿ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆ ಕಟ್ಟಡಗಳನ್ನು ಗುರುತಿಸಿ ದುರಸ್ತಿ ಮಾಡಿ ಮೂಲ ಸೌಕರ್ಯ ಕಲ್ಪಿಸಲು ಗ್ರಾಮ ಪಂಚಾಯಿತಿ ಲಕ್ಷಾಂತರ ಹಣ ವ್ಯಯ ಮಾಡಿದೆ. ಸರ್ಕಾರದಿಂದ ಕೇವಲ ಆಹಾರ ಸಾಮಾಗ್ರಿ ಮಾತ್ರ ಪೂರೈಕೆಯಾಗುತ್ತಿದ್ದು, ಕೇಂದ್ರಗಳ ಸಂಪೂರ್ಣ ನಿರ್ವಹಣಾ ಹೊಣೆ ಗ್ರಾಮ ಪಂಚಾಯಿತಿಯದ್ದು. ಒಂದೊಂದು ಕೇಂದ್ರ ನಿರ್ವಹಣೆಗೆ ವಾರ್ಷಿಕ ₹3 ರಿಂದ 4ಲಕ್ಷ ಅನುದಾನದ ಅವಶ್ಯಕತೆಯಿದೆ.
ಮಕ್ಕಳ ದಾಖಲಾತಿ ಕಡಿಮೆ
ಕರಾವಳಿ ಜಿಲ್ಲೆಗಳಲ್ಲಿ ನರೇಗಾ ಯೋಜನೆಯ ಕಾಮಗಾರಿಗಳಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಕಡಿಮೆಯಿದ್ದು ಉಡುಪಿ ಜಿಲ್ಲೆಯಲ್ಲಿನ 14 ಗ್ರಾಮಗಳ ಕೂಸಿನ ಮನೆಯಲ್ಲಿ ಕಾಪು ತಾಲ್ಲೂಕಿನಲ್ಲಿ ಪಡುಬಿದ್ರಿಯ ಒಂದೇ ಕೇಂದ್ರ ಆರಂಭಿಸಲಾಗಿತ್ತು. ಮಕ್ಕಳ ದಾಖಲಾಗಿ ಹೆಚ್ಚಿನ ಪ್ರಮಾಣದಲ್ಲಿ ಆಗದೆ ಇರುವುದರಿಂದ ಮುಚ್ಚಲ್ಪಟ್ಟಿದೆ ಎಂದು ಉಡುಪಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವ ಹೇಳಿದರು.
ಪಂಚಾಯಿತಿಯಿಂದ ನಿರ್ಣಯ
ಪಡುಬಿದ್ರಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಕೂಸಿನ ಮನೆ ತೆರೆದು ತರಬೇತಾದ ಇಬ್ಬರು ಕೇರ್ಟೇರ್ಸ್ಗಳನ್ನು ನೇಮಿಸಿ ಅವರಿಗೆ ಪಂಚಾಯಿತಿ ಅನುದಾನ ಬಳಸಿ ಕೂಲಿ ಪಾವತಿಸಲು ಕ್ರಮ ವಹಿಸಲಾಗಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಮಕ್ಕಳು ದಾಖಲಾಗದೆ ಇರುವುದರಿಂದ ಕೇಂದ್ರ ಮುಚ್ಚಿದೆ. ಕೂಸಿನ ಮನೆ ಮುಚ್ಚುವ ಬಗ್ಗೆ ಪಂಚಾಯಿತಿನಿಂದ ನಿರ್ಣಯ ಕೈಗೊಳ್ಳಲಾಯಿತು ಎಂದು ಪಡುಬಿದ್ರಿ ಗ್ರಾ.ಪಂ. ಪಿಡಿಒ ಮಂಜುನಾಥ ಶೆಟ್ಟಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.