ಉಡುಪಿ: ಪೇಜಾವರ ಶ್ರೀಗಳಿಗೆ ಅರಳು ಮರಳಾಗಿದೆ. ಅವರ ಹೇಳಿಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಚಿಂತಕ ದಿನೇಶ್ ಅಮಿನ್ ಮಟ್ಟು ಹೇಳಿದರು.
ಅಂಬೇಡ್ಕರ್ ಯುವಸೇನೆಯ ವತಿಯಿಂದ ಭಾನುವಾರ ಬನ್ನಂಜೆ ನಾರಾಯಣಗುರು ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮನೆಯಲ್ಲಿ ತುಂಬಾ ವಯಸ್ಸಾದವರಿದ್ದರೆ ಘಳಿಗೆಗೊಂದು ಮಾತನಾಡುತ್ತಾರೆ. ಮಾತನಾಡಿದ್ದನ್ನೇ ಮರೆತು ಬಿಡುತ್ತಾರೆ. ವಯಸ್ಸಿನ ಕಾರಣಕ್ಕೆ ಅಂಥವರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳದೆ ಕ್ಷಮಿಸಿಬಿಡೋಣ ಎಂದು ಪರೋಕ್ಷವಾಗಿ ವ್ಯಂಗ್ಯವಾಡಿದರು.
‘ಉಡುಪಿ ಚಲೋ ಮಾಡಿದಾಗ ಪೇಜಾವರ ಶ್ರೀಗಳ ಕೆಲವು ತಲೆಕೆಟ್ಟ ಶಿಷ್ಯರು ಉಡುಪಿಯನ್ನು ಶುಚಿಗೊಳಿಸುತ್ತೇವೆ ಎಂದರು. ಇಂತಹ ಶಿಷ್ಯರನ್ನು ಇಟ್ಟುಕೊಂಡ ಗುರುಗಳು ಎಂಥವರಿರಬಹುದು ಎಂದು ತೀರ್ಮಾನ ಮಾಡಬೇಕಿದೆ’ ಎಂದರು.
‘ಪೇಜಾವರ ಶ್ರೀಗಳು ರಾಮಮಂದಿರ ಕಟ್ಟುವ ಹೇಳಿಕೆಯನ್ನಾದರೂ ನೀಡಲಿ, ಸಂವಿಧಾನ ಬದಲಾವಣೆ ಹೇಳಿಕೆಯನ್ನಾದರೂ ನೀಡಲಿ, ಅದರ ಬಗ್ಗೆ ತಲೆ ಕೆಡೆಸಿಕೊಳ್ಳುವುದು ಬೇಡ. ಆದರೆ, ದೇಶದ ಪ್ರಧಾನಿ ಅಥವಾ ಅವರ ಸಚಿವ ಸಂಪುಟದ ಸಹೋದ್ಯೋಗಿಯೊಬ್ಬರು ಸಂವಿಧಾನ ಬದಲಾವಣೆ ಕುರಿತು ಹೇಳಿಕೆ ನೀಡಿದರೆ ಅದಕ್ಕೆ ತಕ್ಕ ವೇದಿಕೆಯಲ್ಲಿ ತಕ್ಕ ಉತ್ತರವನ್ನು ನೀವು ನೀಡಬೇಕು’ ಎಂದರು.
‘ದಲಿತರನ್ನು ನಾಯಿಗಳು ಎಂದು ಕರೆದ ಸಚಿವನನ್ನು ಪ್ರಧಾನಮಂತ್ರಿ ಇದುವರೆಗೂ ಸಚಿವ ಸಂಪುಟದಲ್ಲಿ ಇಟ್ಟುಕೊಂಡಿದ್ದಾರೆ ಎಂದರೆ, ದಲಿತರ ಮೇಲೆ, ಅಂಬೇಡ್ಕರ್ ಹಾಗೂ ಸಂವಿಧಾನದ ಮೇಲೆ ಅವರಿಗಿರುವ ಪ್ರೀತಿ ತಿಳಿಯುತ್ತದೆ ಎಂದು ಅಮೀನ್ಮಟ್ಟು ಟೀಕಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.