ಉಡುಪಿ: ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಬೇನಾಮಿ ಸಂಸ್ಥೆಯಲ್ಲ; ಅಧಿಕೃತವಾಗಿ ನೋಂದಣಿಯಾಗಿರುವ ಸಂಸ್ಥೆಯಾಗಿದೆ. ಸಂಸ್ಥೆಯ ವಿರುದ್ದ ಆಧಾರ ರಹಿತ ಭ್ರಷ್ಟಾಚಾರ ಆರೋಪ ಮಾಡುವುದು ಸರಿಯಲ್ಲ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಬುಧವಾರ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಸ್ವಾಮೀಜಿ, ವಿಶ್ವಹಿಂದೂ ಪರಿಷತ್ ಪುಂಡ ಪೋಕರಿಗಳ ಸಂಸ್ಥೆಯಲ್ಲ. ವಿಶ್ವ ಹಿಂದೂ ಪರಿಷತ್ಗೆ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹದ ಜವಾಬ್ದಾರಿ ನೀಡಲಾಗಿದೆ. ಹಿರಿಯ ಮುಂದಾಳುಗಳ ನೇತೃತ್ವದಲ್ಲಿ ನಿಧಿ ಸಂಗ್ರಹ ಕಾರ್ಯ ನಡೆಯುತ್ತಿದೆ ಎಂದರು.
ಟ್ರಸ್ಟ್ ಬಗ್ಗೆ ಮತ್ತು ನಿಧಿ ಸಂಗ್ರಹದ ಬಗ್ಗೆ ಸಂಶಯಗಳಿದ್ದರೆ ಕುಮಾರಸ್ವಾಮಿ ಅವರು ಪರಿಹರಿಸಿಕೊಳ್ಳಲಿ. ಆರೋಪ ಮಾಡುವುದು ಸರಿಯಲ್ಲ, ಆರೋಪಕ್ಕೆ ಪ್ರತ್ಯಾರೋಪಗಳು ಉತ್ತರವಾಗುತ್ತವೆ. ನಿಧಿ ಸಂಗ್ರಹದಲ್ಲಿ ಪಾರದರ್ಶಕತೆ ದೃಷ್ಟಿಯಿಂದ ಟ್ರಸ್ಟಿನ ವ್ಯವಹಾರಗಳನ್ನು ಲೆಕ್ಕಪರಿಶೋಧನೆ ಮಾಡಿಸಲಾಗುತ್ತಿದೆ. ಇದಕ್ಕೆ ಸೂಕ್ತ ದಾಖಲೆಗಳು ಸಿಗುತ್ತವೆ, ಟ್ರಸ್ಟಿನ ವ್ಯವಹಾರದಲ್ಲಿ ಮುಚ್ಚುಮರೆ ಇಲ್ಲ ಎಂದು ಶ್ರೀಗಳು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.