ADVERTISEMENT

ಎದುರಿಗೆ ಸಿಕ್ಕಾಗ ಗೌರವ ಕೊಡುತ್ತಾರೆ, ಹಿಂದಿನಿಂದ ಟೀಕೆ ಮಾಡುತ್ತಾರೆ: ಪೇಜಾವರಶ್ರೀ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2018, 13:06 IST
Last Updated 27 ಡಿಸೆಂಬರ್ 2018, 13:06 IST
   

ಉಡುಪಿ: ದಲಿತರು ಪ್ರವೇಶ ಮಾಡಿದ್ದಕ್ಕೆ ಉಡುಪಿಯನ್ನು ಸ್ವಚ್ಛಗೊಳಿಸಲು ಮುಂದಾಗಲಿಲ್ಲ; ಎಡಬಿಡಂಗಿ ಹೋರಾಟಗಾರರು ಪ್ರತಿಭಟನೆ ಮಾಡಿದ್ದಕ್ಕೆ ಶಿಷ್ಯರು ಶುದ್ಧಿಗೊಳಿಸಲು ಮುಂದಾದರು ಎಂದು ಪೇಜಾವರ ಶ್ರೀಗಳು ಹೇಳಿದರು.

ಗುರುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಪತ್ರಕರ್ತ ದಿನೇಶ್ ಅಮೀನ್‌ ಮಟ್ಟು ಯಾವ ಉದ್ದೇಶವಿಟ್ಟುಕೊಂಡು ‘ಅರಳು ಮರಳು’ ಹೇಳಿಕೆ ನೀಡಿದರೋ ತಿಳಿಯದು. ಎದುರಿಗೆ ಸಿಕ್ಕಾಗ ಗೌರವಯುತವಾಗಿ ಮಾತನಾಡುತ್ತಾರೆ. ಆದರೆ, ಹಿಂದಿನಿಂದ ಮಾತ್ರ ಟೀಕೆ ಮಾಡುತ್ತಲೇ ಇರುತ್ತಾರೆ. ಇಂತಹ ನಡವಳಿಕೆ ಸರಿಯಲ್ಲ ಎಂದು ತಿರುಗೇಟು ನೀಡಿದರು.

‘ಭಿನ್ನಾಭಿಪ್ರಾಯಗಳ ಕುರಿತು ಅವರೊಂದಿಗೆ ಬಹಿರಂಗವಾಗಿ ಚರ್ಚಿಸಲು ಸಿದ್ಧ. ಉಡುಪಿ ಅಥವಾ ಬೆಂಗಳೂರಿನಲ್ಲಿ ಅಮೀನ್‌ಮಟ್ಟು ನನ್ನೊಂದಿಗೆ ಬಂದು ಚರ್ಚಿಸಲಿ’ ಎಂದು ಶ್ರೀಗಳು ಆಹ್ವಾನ ನೀಡಿದರು.

ADVERTISEMENT

‘ಪೇಜಾವರ ಶ್ರೀಗಳನ್ನು ಮುಟ್ಟಬೇಕು ಎನಿಸಿತ್ತು; ಆದರೆ ಮುಟ್ಟಲಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಳ್ಳುತ್ತಾರೆ. ಅವರು ಮುಟ್ಟಿದರೆ ಅಭ್ಯಂತರವಿಲ್ಲ ಎಂದರು. ದಲಿತರೊಟ್ಟಿಗೆ ಊಟ ಮಾಡಲಿ ಎಂದು ಕೆಲವರು ಸವಾಲು ಹಾಕುತ್ತಾರೆ. ನಾನು ಬ್ರಾಹ್ಮಣರೊಂದಿಗೂ ಊಟ ಮಾಡುವುದಿಲ್ಲ. ಮಠದ ಊಟದ ಪದ್ಧತಿಯೇ ಬೇರೆ. ಅದರಂತೆಯೇ ಪ್ರತ್ಯೇಕವಾಗಿ ಭೋಜನ ಸ್ವೀಕರಿಸುತ್ತೇನೆ’ ಎಂದು ಶ್ರೀಗಳು ಸಮಜಾಯಿಷಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.