
ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಅವೈಜ್ಞಾನಿಕವಾಗಿ ರಸ್ತೆ ಅಗೆದು ಅಳವಡಿಸಿದ ಪೈಪ್ ಲೈನ್ ಕಿತ್ತುಹೋಗಿ, ನಳ್ಳಿನೀರು ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಮಂಗಳವಾರ ಸಾರ್ವಜನಿಕರು ಪುರಸಭೆಗೆ ಮುತ್ತಿಗೆ ಹಾಕಿದರು.
ಕಾರ್ಕಳ: ಪುರಸಭೆ ವ್ಯಾಪ್ತಿಯಲ್ಲಿ ರಾಜ್ಯ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಕುಡಿಯುವ ನೀರು ಸರಬರಾಜಿಗಾಗಿ ಒಂದು ವರ್ಷದಿಂದ ನಿರಂತರ ಅವೈಜ್ಞಾನಿಕವಾಗಿ ರಸ್ತೆ ಅಗೆದು ಜೋಡಿಸಿದ್ದ ಪೈಪ್ಲೈನ್ ಕಿತ್ತುಹೋಗಿ ನಳ್ಳಿನೀರು ಸಂಪರ್ಕ ಕಡಿತವಾಗಿದೆ. ಇದರಿಂದ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಇದಕ್ಕೆ ಜಲಮಂಡಳಿ ನೇರ ಹೊಣೆ ಎಂದು ಆರೋಪಿಸಿ ಪುರಸಭೆ ಮಾಜಿ ಅಧ್ಯಕ್ಷೆ ಪ್ರತಿಮಾ ಮೋಹನ್ ನೇತೃತ್ವದಲ್ಲಿ ಪುರಸಭೆ ಕಚೇರಿಗೆ ಸಾರ್ವಜನಿಕರು ಮುತ್ತಿಗೆ ಹಾಕಿದರು.
ಪುರಸಭೆಯ ಎಲ್ಲಾ ರಸ್ತೆಗಳು ಅಮೃತ ಯೋಜನೆಯ ಕಳಪೆ ಕಾಮಗಾರಿಯಿಂದಾಗಿ ಹದಗೆಟ್ಟು ಹೋಗಿವೆ. ಬಂಗ್ಲೆಗುಡ್ಡೆ, ಪತ್ತೊಂಜಿಕಟ್ಟೆ, ಗುಂಡ್ಯ, ಕಜೆ ಪರಿಸರದಲ್ಲಿ ನೀರಿಗಾಗಿ ಜನರು ಪರಿತಪಿಸುತ್ತಿದ್ದಾರೆ. ನಳ್ಳಿಗಳಲ್ಲಿ ಕೆಸರು ನೀರು ಬರುತ್ತಿದ್ದು, ಕುಡಿಯಲು ಅಸಾಧ್ಯ. ಇದಕ್ಕೆ ರಾಜ್ಯ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ನೇರ ಹೊಣೆಯಾಗಿದ್ದು, ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕು. ತಪ್ಪಿದರೆ ನಗರ ನೀರು ಸರಬರಾಜು ಮಂಡಳಿ ಕಚೇರಿಗೆ ಮುತ್ತಿಗೆ ಹಾಕಲಾಗವುದು ಎಂದು ಪ್ರತಿಮಾ ಎಚ್ಚರಿಕೆ ನೀಡಿದರು.
ಮಾಜಿ ಅಧ್ಯಕ್ಷೆ ರೆಹಮತ್ ನವೀದ್ ನಾಸಿರ್ ಶೇಕ್, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ್, ಸದಸ್ಯ ವಿವೇಕಾನಂದ ಶೆಣೈ, ಸಾಮಾಜಿಕ ಮುಖಂಡ ಪ್ರಸನ್ನ ಇದ್ದರು.