ADVERTISEMENT

ಉಡುಪಿ| ಸೂರ್ಯ ಘರ್ ಯೋಜನೆಯಿಂದ ವಿದ್ಯುತ್‌ ಉಳಿತಾಯ: ಸಂಸದ ಕೋಟ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 7:46 IST
Last Updated 9 ಫೆಬ್ರುವರಿ 2026, 7:46 IST
ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು
ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು   

ಉಡುಪಿ: ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯು ಸಬ್ಸಿಡಿ ದರದಲ್ಲಿ ಮೇಲ್ಛಾವಣಿಗೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ ವಿದ್ಯುತ್  ವೆಚ್ಚ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯಡಿ 4,435 ಜನರು ಅರ್ಜಿ ಸಲ್ಲಿಸಿದ್ದು, ಅವರಲ್ಲಿ 4,413 ಮಂದಿಗೆ ಆರ್ಥಿಕವಾಗಿ ಅನುಮೋದನೆ ದೊರೆತಿದ್ದು, 1,592 ಜನ ವೆಂಡರ್‌ಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. 1,222 ಜನರಿಗೆ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, 1,135 ಮಂದಿಗೆ ಈಗಾಗಲೇ ಸಬ್ಸಿಡಿ ಹಣ ನೀಡಲಾಗಿದೆ ಎಂದರು.

ಜಿಲ್ಲೆಯ 5 ವಿಧಾನಸಭಾ ಕ್ಷೇತ್ರ ವ್ಯಾಪ್ತಿಗಳಲ್ಲಿ ಮಾದರಿ ಸೋಲಾರ್ ಗ್ರಾಮಕ್ಕೆ ಬೈಂದೂರು ತಾಲ್ಲೂಕಿನ ಕಿರಿಮಂಜೇಶ್ವರ, ಬ್ರಹ್ಮಾವರ ತಾಲ್ಲೂಕಿನ ಕೋಟತಟ್ಟು, ಉಡುಪಿ ತಾಲ್ಲೂಕಿನ ಉಪ್ಪೂರು, ಕಾಪು ತಾಲ್ಲೂಕಿನ ಮಜೂರು ಹಾಗೂ ಕಾರ್ಕಳ ತಾಲ್ಲೂಕಿನ ನಿಟ್ಟೆ ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ಸೌರ ಶಕ್ತಿ ಘಟಕ ಅಳವಡಿಸಲು ಚಾಲೆಂಜ್ ಅವಧಿಯನ್ನು ಡಿಸೆಂಬರ್ 31 ರ ವರೆಗೆ ನಿಗದಿಪಡಿಸಲಾಗಿದೆ ಎಂದು ಹೇಳಿದರು.

ADVERTISEMENT

ಕಿರಿಮಂಜೇಶ್ವರ ಗ್ರಾಮದವರು 26 ಕಿಲೋ ವ್ಯಾಟ್, ಕೋಟತಟ್ಟು ಗ್ರಾಮದವರು 1,777 ಕಿಲೋ ವ್ಯಾಟ್, ಉಪ್ಪೂರು ಗ್ರಾಮದವರು 163 ಕಿಲೋ ವ್ಯಾಟ್, ಮಜೂರು 13.88 ಕಿ.ವ್ಯಾಟ್ ಹಾಗೂ ನಿಟ್ಟೆ ಗ್ರಾಮದವರು 1577.31 ಕಿ.ವ್ಯಾ.ಸಾಮರ್ಥ್ಯದ ಸೌರ ಫಲಕಗಳನ್ನು ಅಳವಡಿಸಿದ್ದು, ಇವುಗಳಲ್ಲಿ ಯಾವ ಗ್ರಾಮಗಳಲ್ಲಿ ಹೆಚ್ಚು ಸೌರ ಶಕ್ತಿ ಘಟಕಗಳನ್ನು ಪರಿಣಾತ್ಮಕವಾಗಿ ಅನುಷ್ಠಾನ ಮಾಡಿರುವ ಕುರಿತು ಮೈಸೂರು ರೀಜನಲ್ ಕಮೀಷನ್ ಅವರು ಪರಾಮರ್ಶಿಸಿ, ಒಂದು ಗ್ರಾಮವನ್ನು ಆಯ್ಕೆ ಮಾಡಲಿದ್ದಾರೆ. ಆಯ್ಕೆಯಾದ ಒಂದು ಗ್ರಾಮಕ್ಕೆ ₹1 ಕೋಟಿ ಬಹುಮಾನವನ್ನು ಅನುದಾನದ ರೂಪದಲ್ಲಿ ನೀಡಲಿದ್ದು, ಅದರಲ್ಲಿ ಸೋಲಾರ್ ಪಾರ್ಕ್ ಮಾಡಲು ಅವಕಾಶ ಕಲ್ಪಿಸಲಾಗುವುದಾಗಿ ತಿಳಿಸಿದರು.

ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ ಮಾತನಾಡಿದರು. ಮೆಸ್ಕಾಂ ಅಧೀಕ್ಷಕ ಎಂಜಿನಿಯರ್ ನರಸಿಂಹ, ಕಿರಿಮಂಜೇಶ್ವರ, ಕೋಟತಟ್ಟು, ಉಪ್ಪೂರು, ಮಜೂರು ಹಾಗೂ ನಿಟ್ಟೆ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.