ADVERTISEMENT

ಮುರಾರಿ ಮರಾಠೆ ಮನೆಗೆ ಸೋಲಾರ್ ಬೆಳಕು

‘ಪ್ರಜಾವಾಣಿ’ ವರದಿ ಬೆನ್ನಲ್ಲೇ ಡಿಡಿಪಿಐ ಎನ್‌.ಎಚ್‌.ನಾಗೂರ ಭೇಟಿ ನೀಡಿ ನೆರವು

​ಪ್ರಜಾವಾಣಿ ವಾರ್ತೆ
Published 31 ಜುಲೈ 2021, 13:33 IST
Last Updated 31 ಜುಲೈ 2021, 13:33 IST
ಪ್ರಜಾವಾಣಿಯಲ್ಲಿ ಸುದ್ದಿ ಪ್ರಕಟವಾದ ಬೆನ್ನಲ್ಲೆ ಶನಿವಾರ ಡಿಡಿಪಿಐ ಎನ್‌.ಎಚ್‌.ನಾಗೂರ ಅವರು ಮುರಾರಿ ಮರಾಠಿ ಅವರ ಮನೆಗೆ ತೆರಳಿ ಸೋಲಾರ್ ಉಪಕರಣದ ನೆರವು ನೀಡಿದರು.
ಪ್ರಜಾವಾಣಿಯಲ್ಲಿ ಸುದ್ದಿ ಪ್ರಕಟವಾದ ಬೆನ್ನಲ್ಲೆ ಶನಿವಾರ ಡಿಡಿಪಿಐ ಎನ್‌.ಎಚ್‌.ನಾಗೂರ ಅವರು ಮುರಾರಿ ಮರಾಠಿ ಅವರ ಮನೆಗೆ ತೆರಳಿ ಸೋಲಾರ್ ಉಪಕರಣದ ನೆರವು ನೀಡಿದರು.   

ಉಡುಪಿ: ಬ್ರಹ್ಮಾವರ ತಾಲ್ಲೂಕಿನ ಮಂದಾರ್ತಿಯ ಹೆಗ್ಗುಂಜೆ ಗ್ರಾಮದಲ್ಲಿರುವ ಮುರಾರಿ ಮರಾಠಿ ಹಾಗೂ ಪ್ರಭಾವತಿ ದಂಪತಿಯ ಮನೆಗೆ 13 ವರ್ಷಗಳಿಂದ ವಿದ್ಯುತ್ ಸಂಪರ್ಕ ಸಿಗದ ಪರಿನಾಮ ಮೂವರು ಮಕ್ಕಳ ಆನ್‌ಲೈನ್ ಕಲಿಕೆಗೆ ಅಡ್ಡಿಯಾಗಿರುವ ಕುರಿತು ‘ಪ್ರಜಾವಾಣಿ’ ಜುಲೈ 31ರಂದು ‘ಕತ್ತಲಲ್ಲಿ ಮಂಕಾಗುತ್ತಿದೆ ಮಕ್ಕಳ ಭವಿಷ್ಯ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.

ಸುದ್ದಿ ಪ್ರಕಟವಾದ ಬೆನ್ನಲ್ಲೆ ಶನಿವಾರ ಡಿಡಿಪಿಐ ಎನ್‌.ಎಚ್‌.ನಾಗೂರ ಅವರು ಮುರಾರಿ ಮರಾಠಿ ಮನೆಗೆ ತೆರಳಿ ಸೋಲಾರ್ ಉಪಕರಣ ನೀಡಿದರು. ಕೆಲಹೊತ್ತು ಕುಟುಂಬದ ಸದಸ್ಯರೊಂದಿಗೆ ಮಾತನಾಡಿದರು. ವಿದ್ಯಾಭ್ಯಾಸವನ್ನು ಮುಂದುವರಿಸುವಂತೆ, ಸಮಾಜದಲ್ಲಿ ಉತ್ತಮ ಸ್ಥಾನಕ್ಕೇರುವಂತೆ ಮಕ್ಕಳಿಗೆ ಡಿಡಿಪಿಐ ಸಲಹೆ ನೀಡಿದರು.

‌ಮತ್ತೊಂದೆಡೆ, ಪ್ರಸಿದ್ಧ ಸೆಲ್ಕೋ ಸೋಲಾರ್ ಸಂಸ್ಥೆಯ ಪ್ರತಿನಿಧಿಗಳು ಕೂಡ ಮುರಾರಿ ಮರಾಠಿ ಅವರಿಗೆ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಜಿಲ್ಲಾಧಿಕಾರಿ ಜಿ.ಜಗದೀಶ್‌ ಅವರೂ ಅಧಿಕಾರಿಗಳಿಂದ ಮಾಹಿತಿ ಪಡೆದು ನೆರವು ನೀಡುವುದಾಗಿ ತಿಳಿಸಿದ್ದಾರೆ.

ADVERTISEMENT

ಮುರಾರಿ ಮರಾಠಿ ಕುಟುಂಬ ಸರ್ಕಾರಿ ಜಮೀನಿನಲ್ಲಿ ವಾಸವಾಗಿದ್ದು, ಜಾಗದ ದಾಖಲೆಗಳಿಲ್ಲ ಎಂಬ ಕಾರಣಕ್ಕೆ ಯಾವುದೇ ಸೌಲಭ್ಯಗಳು ದೊರೆತಿಲ್ಲ. ಮನೆಯ ಹತ್ತಿರವೇ ವಿದ್ಯುತ್ ಕಂಬ ಹಾದುಹೋಗಿದ್ದರೂ ಕುಟುಂಬಕ್ಕೆ ಬೆಳಕಿನ ಭಾಗ್ಯ ದೊರೆತಿಲ್ಲ. ನಳ್ಳಿ ನೀರಿನ ಸಂಪರ್ಕವೂ ಸಿಕ್ಕಿಲ್ಲ.

ಜಿಲ್ಲೆಯಾದ್ಯಂತ ಆನ್‌ಲೈನ್ ತರಗತಿಗಳು ಆರಂಭವಾಗಿದ್ದರೂ ವಿದ್ಯುತ್ ಸಂಪರ್ಕವಿಲ್ಲದ ಕಾರಣಕ್ಕೆ ಮುರಾರಿ ಮರಾಠಿ ಅವರ ಮೂವರು ಮಕ್ಕಳ ಕಲಿಕೆಗೆ ಅಡ್ಡಿಯಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕು ಎಂದು ಕುಟುಂಬ ಆಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.