ADVERTISEMENT

ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ 12ರಂದು

ಉಡುಪಿಯಲ್ಲಿ ಪ್ರಥಮ ಬಾರಿಗೆ ಸಮಾರಂಭ; ಕರಾವಳಿಯ ಮೂವರಿಗೆ ಪ್ರಶಸ್ತಿ ಗೌರವ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2019, 14:13 IST
Last Updated 11 ಫೆಬ್ರುವರಿ 2019, 14:13 IST

ಉಡುಪಿ: ಕರಾವಳಿಯನ್ನು ಪ್ರತಿನಿಧಿಸುವಯಕ್ಷಗಾನ, ಭೂತಾರಾಧನೆ, ನಟರಾಜನ ಕಟ್ಔಟ್‌ಗಳು, ಪ್ರವೇಶದ್ವಾರಕ್ಕೆ ಕರಾವಳಿಯ ಭೌಗೋಳಿಕ ಅಸ್ಮಿತೆ ಬಿಂಬಿಸುವ ಕಾಪು ದೀಪಸ್ತಂಭ, ಮೀನುಗಾರಿಕೆ ದೋಣಿ, ಕರಾವಳಿಯ ದ್ವೀಪದ ಬಂಡೆಗಳು...

ಹೀಗೆ ನಗರದ ಟೌನ್‌ಹಾಲ್‌ ಸಿಂಗಾರಗೊಂಡಿದೆ. ಉಡುಪಿಯಲ್ಲಿ ಮೊದಲ ಬಾರಿಗೆ ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭ ಮಂಗಳವಾರ ನಡೆಯಲಿದ್ದು, ಪುರಭವನ ಆಕರ್ಷಿಸುತ್ತಿದೆ.

ಸಂಜೆ 4.30ಕ್ಕೆ ವಿವಿಧ ರಂಗತಂಡಗಳಿಂದ ರಂಗಗೀತೆಗಳು ಸಮಾರಂಭಕ್ಕೆ ನಾಂದಿಯಾಗಲಿವೆ. ನಂತರಪ್ರಶಸ್ತಿ ಪುರಸ್ಕೃತರನ್ನು ಟೌನ್‌ ಹಾಲ್‌ ಮುಖ್ಯದ್ವಾರದಿಂದ ಜಾನಪದ ಕಂಗೀಲು, ಗುಮಟೆ ನೃತ್ಯಗಳ ಮೂಲಕ ಕರೆತರಲಾಗುವುದು. ಇದನ್ನುಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯು ಪ್ರಾಯೋಜಿಸುತ್ತಿದೆ.

ADVERTISEMENT

ನಂತರ ಲೇಖಕ ಬರಗೂರು ರಾಮಚಂದ್ರಪ್ಪ ಅವರು ಚೆಂಡೆ ಬಾರಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ರಂಗಕರ್ಮಿ ಎಂ.ಎಸ್‌.ಸತ್ಯು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್‌ ಆಶಯ ನುಡಿಗಳನ್ನು ಆಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ನಿರ್ದೇಶಕ ಎನ್.ಆರ್‌.ವಿಶುಕುಮಾರ್‌ ಅಧ್ಯಕ್ಷತೆ ವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಪದ್ಮಾ ಕೊಡಗು ಅವರ ‘ಉಡುಪಿ ಜಿಲ್ಲಾ ರಂಗಭೂಮಿ’, ಬಸವರಾಜ ಬೆಂಗೇರಿ ಅವರ ‘ಅವಿಭಜಿತ ಧಾರವಾಡ ಜಿಲ್ಲಾ ರಂಗಮಾಹಿತಿ’ ಹಾಗೂ ಗಣೇಶ ಅಮೀನಗಡ ಅವರ ‘ರಹಿಮಾನವ್ವ ಕಲ್ಮನಿ’ ಕೃತಿ ಬಿಡುಗಡೆಗೊಳ್ಳಲಿವೆ. ಕರಾವಳಿಯ ರಂಗಕರ್ಮಿಗಳಾದಪ್ರಭಾಕರ ಕಲ್ಯಾಣಿ, ಮೈಮ್‌ ರಮೇಶ್, ಮೋಹನ್‌ ಮಾರ್ನಾಡು ಹಾಗೂ ಉಷಾ ಭಂಡಾರಿ ಸೇರಿದಂತೆ 25 ರಂಗಕರ್ಮಿಗಳಿಗೆ ವಾರ್ಷಿಕ ಪ್ರಶಸ್ತಿ ಹಾಗೂ ನಾಲ್ಕು ದತ್ತಿ ಪುರಸ್ಕಾರಗಳು ಪ್ರದಾನವಾಗಲಿವೆ. ಜತೆಗೆ, ಪಿ.ಗಂಗಾಧರಸ್ವಾಮಿ ಅವರಿಗೆ ಗೌರವ ಪ್ರಶಸ್ತಿ ನೀಡಲಾಗುವುದು.

ಸುದೇಶ್‌ ಮಹಾನ್‌ ಅವರು ನಾಟಕ ಅಕಾಡೆಮಿಯ ಪ್ರಶಸ್ತಿ ಪ್ರದಾನಕ್ಕೆಂದೇ ರಚಿಸಿದ ವಿಶಿಷ್ಟ ಕಲಾಕೃತಿಯನ್ನು ಪ್ರಶಸ್ತಿ ಫಲಕವಾಗಿ, ನಟರಾಜ ವಿಗ್ರಹವನ್ನು ಸ್ಮರಣಿಕೆಯಾಗಿ ನೀಡಲಾಗುವುದು.‌

ರಂಗಭೂಮಿ ಉಡುಪಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ‘ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉಡಪಿಯಲ್ಲಿ ಆಯೋಜಿಸಿರುವುದಕ್ಕೆ ಖುಷಿಯಾಗಿದೆ. ಕರಾವಳಿಯ ಪ್ರೀತಿ, ಅಭಿಮಾನ ಹೀಗೆಯೇ ಮುಂದುವರಿಯಲಿ’ ಎಂದು ಆಶಿಸಿದರು.

ಸರ್ಕಾರದ ಅನುದಾನ ನಿರೀಕ್ಷಿಸದೆ ನಿರಂತರವಾಗಿ ರಂಗಭೂಮಿಯ ಚಟುವಟಿಕೆಗಳು ಉಡುಪಿಯಲ್ಲಿ ನಡೆಯುತ್ತಿವೆ. ಇಂಥ ಸಂದರ್ಭದಲ್ಲಿ ನಾಟಕ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭದಿಂದ‌ರಂಗ ಚಟುವಟಿಕೆಗಳಿಗೆ ಉತ್ತೇಜನ ನೀಡಿದಂತಾಗಿದೆ. ರಂಗತಂಡಗಳಿಗೆ ಶಕ್ತಿ ಮೂಡಬಹುದು ಎಂದು ರಂಗಭೂಮಿ ಉಡುಪಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ ಚಂದ್ರ ಕುತ್ಪಾಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.