ಉಡುಪಿ: ರಾಷ್ಟ್ರೀಯ ಹೆದ್ದಾರಿ 169 ‘ಎ’ ಕಾಮಗಾರಿ ಸಂಬಂಧ ಪರ್ಕಳದಲ್ಲಿ ಆರಂಭವಾಗಿರುವ ಹಳೆಯ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಭಾನುವಾರ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಏಕಾಏಕಿ ಕಟ್ಟಡಗಳನ್ನು ಒಡೆಯಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಸ್ಥಳಕ್ಕೆ ಬಂದ ಅಧಿಕಾರಿಗಳು ಹಾಗೂ ಅಂಗಡಿ ಮಾಲೀಕರ ನಡುವೆ ವಾಗ್ವಾದ ನಡೆಯಿತು. ಹಳೆ ಕಟ್ಟಡಗಳ ತೆರವು ವಿಧಾನಕ್ಕೆ ಸ್ಥಳೀಯರ ಸಮ್ಮತಿ ಇಲ್ಲ. ಏಕಾಏಕಿ ಕಟ್ಟಡಗಳನ್ನು ಒಡೆಯುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೂರಾರು ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಅಧಿಕಾರಿಗಳು ತಾತ್ಕಾಲಿಕವಾಗಿ ತೆರವು ಕಾರ್ಯಾಚರಣೆಯನ್ನು ನಿಲ್ಲಿಸಿದರು. ಕಾಂಗ್ರೆಸ್ ಮುಖಂಡರಾದ ರಮೇಶ್ ಕಾಂಚನ್ ಹಾಗೂ ಅಮೃತ್ ಶೆಣೈ ಸ್ಥಳದಲ್ಲಿದ್ದರು.
ಸುದ್ದಿ ತಿಳಿಯುತ್ತಿದ್ದಂತೆ ರಸ್ತೆ ವಿಸ್ತರಣೆ ಸ್ಥಳಕ್ಕೆ ಭೇಟಿನೀಡಿದ ಶಾಸಕ ರಘುಪತಿ ಭಟ್ ಸ್ಥಳೀಯರು ಹಾಗೂ ಕಾಂಗ್ರೆಸ್ ಮುಖಂಡರ ಜತೆ ಮಾತುಕತೆ ನಡೆಸಿದರು. ಭೂಸ್ವಾಧೀನ ಪ್ರಕ್ರಿಯೆ ಸಂಬಂಧ ತ್ರೀ ಜಿ ಪೂರ್ಣಗೊಂಡು ಪರಿಹಾರ ಮಂಜೂರಾದ ಬಳಿಕವೇ ಕಾಮಗಾರಿ ಆರಂಭವಾಗಿದೆ. ಜಾಗ ಕಳೆದುಕೊಂಡ ಎಲ್ಲರಿಗೂ ನಿಶ್ಚಿತವಾಗಿ ಪರಿಹಾರ ಸಿಗಲಿದೆ. ರಸ್ತೆ ವಿಸ್ತರಣೆ ಹಾಗೂ ಹೆದ್ದಾರಿ ಕಾಮಗಾರಿಗೆ ಅಡ್ಡಿಮಾಡದಂತೆ ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.