
ಕಾಪು (ಪಡುಬಿದ್ರಿ): ಕಾಪು ತಾಲ್ಲೂನ ಪಾದೂರಿನಲ್ಲಿರುವ ಐಎಸ್ಪಿಆರ್ಎಲ್ ತೈಲ ಘಟಕದ ಎರಡನೇ ಹಂತದ ಯೋಜನೆಯನ್ನು ಖಾಸಗಿ ಸಂಸ್ಥೆ ಮೇಘಾ ಕಂಪನಿಗೆ ನೀಡಿರುವುದನ್ನು ವಿರೋಧಿಸಿ ಮಾಜಿ ಸಚಿವ ವಿನಯಕುಮಾರ್ ಸೊರಕೆ ನೇತೃತ್ವದಲ್ಲಿ ಶುಕ್ರವಾರ ಪಾದೂರಿನ ಘಟಕದ ಎದುರು ಪ್ರತಿಭಟನೆ ನಡೆಯಿತು.
ಕಾಪುವಿನ ಪಾದೂರು ಉಳಿಸಿ-ಪರಿಸರ ರಕ್ಷಿಸಿ ಹೋರಾಟ ಸಮಿತಿಯು ಪ್ರತಿಭಟನೆ ಆಯೋಜಿಸಿದ್ದು, ಕಂಪನಿ ಮುಂಭಾಗದಲ್ಲಿ ಜಮಾಯಿಸಿದ್ದ ಪ್ರತಿಭಟನಕಾರು ಯೋಜನೆಯನ್ನು ಖಾಸಗಿ ಸಂಸ್ಥೆಗೆ ನೀಡಿರುವ ಕ್ರಮವನ್ನು ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಬಳಿಕ ಐಎಸ್ಪಿಆರ್ಎಲ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮೇಘಾ ಕಂಪನಿಗೆ ಎರಡನೇ ಹಂತದ ಯೋಜನೆಯ ಗುತ್ತಿಗೆ ನೀಡಿರುವ ಕ್ರಮವನ್ನು ಪರಿಶೀಲಿಸುವಂತೆ ಆಗ್ರಹಿಸಿದರು.
ಪಾದೂರಿನಲ್ಲಿ ಪ್ರಾರಂಭಗೊಂಡ ಕೇಂದ್ರ ಸರ್ಕಾರದ ಯೋಜನೆಯಾಗಿರುವ ಐಎಸ್ಪಿಆರ್ಎಲ್ ಕಚ್ಚಾತೈಲ ಸಂಸ್ಕರಣ ಘಟಕದ 2 ನೇ ಹಂತದ ಯೋಜನೆಯನ್ನು ಈಗ ಕೇಂದ್ರ ಸರ್ಕಾರ ಮೇಘ ಎಂಜಿನಿಯರಿಂಗ್ ಖಾಸಗಿ ಕಂಪನಿಗೆ 60 ವರ್ಷಗಳಿಗೆ ಗುತ್ತಿಗೆ ನೀಡಿದೆ. ಮೇಘ ಎಂಜಿನಿಯರಿಂಗ್ ಕಂಪನಿಯವರು ಕಾಮಗಾರಿ ಪ್ರಾರಂಭಿಸಲು ಬೇರೆ ಬೇರೆ ಇಲಾಖೆಗಳ ಸರಿಯಾದ ಪರವಾನಗಿಯನ್ನು ಪಡೆಯದೆ ಸ್ಥಳೀಯರಿಗೆ ಉದ್ಯೋಗವಕಾಶ ನೀಡದೆ ನಿರ್ಲಕ್ಷಿಸಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಮೇಘಾ ಕಂಪನಿಯವರು ಕಾಮಗಾರಿ ಪ್ರಾರಂಭ ಮಾಡಲು ಸಂಬಂಧಪಟ್ಟ ಇಲಾಖೆಗಳ ಪರವಾನಗಿ ಪಡೆಯಲಿಲ್ಲ. ಸ್ಥಳೀಯರಿಗೆ ಉದ್ಯೋಗ ನೀಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಜನಾಂದೋಲನದ ಮೂಲಕ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಕರಾವಳಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್, ದಿವಾಕರ್ ಶೆಟ್ಟಿ, ಜಿತೇಂದ್ರ ಫರ್ಟಾಡೋ, ಹನೀಫ್ ಮೂಳೂರು, ಸಂತೋಫ್ ಬೈರಂಪಳ್ಳಿ, ಅನ್ಸಾರ್ ಅಹಮ್ಮದ್, ಸುರೇಂದ್ರ ಜೈನ್ ಮಾತನಾಡಿದರು.
ಹೋರಾಟ ಸಮಿತಿಯ ಕಾರ್ಯದರ್ಶಿ ಶರ್ಫುದ್ದೀನ್ ಶೇಖ್ ಪ್ರಸ್ತಾವಿಕ ಮಾತನಾಡಿದರು. ಹೋರಾಟ ಸಮಿತಿಯ ಅಧ್ಯಕ್ಷ ಸದಾನಂದ ಪೂಜಾರಿ ಹೇರೂರ್, ವಿಲ್ಸನ್ ರೋಡ್ರಗಸ್, ಶಾಂತಲತಾ ಶೆಟ್ಟಿ, ಹಸನಬ್ಬ ಶೇಖ್, ರತನ್ ಶೆಟ್ಟಿ, ಮಹಮ್ಮದ್ ಫಾರೂಕ್ ಚಂದ್ರನಗರ, ದಿವಾಕರ್ ಬಿ ಶೆಟ್ಟಿ, ಅಝೀಝ್ ಹೆಜಮಾಡಿ, ಪ್ರಬೋದ್ ಚಂದ್ರ ಹೆಜಮಾಡಿ, ನವೀನ್ ಎನ್. ಶೆಟ್ಟಿ, ರಮೀಝ್ ಹುಸೈನ್, ರಿಯಾಜ್ ಮುದರಂಗಡಿ, ನಿಯಾಜ್ ಪಡುಬಿದ್ರಿ, ಅಮೀರ್ ಮಹಮ್ಮದ್, ಸೈಯ್ಯದ್ ನಿಝಾಮುದ್ದೀನ್, ಇಮ್ರಾನ್ ಮಜೂರು, ಸಾದಿಕ್ ಕೆ ಪಿ, ಅನ್ವರ್ ಅಲಿ, ಬಾಸ್ಕರ್ ಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.