
ಕುಂದಾಪುರ: ಇಲ್ಲಿನ ತಾಲ್ಲೂಕು ಕಚೇರಿಗೆ ಗುರುವಾರ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಕೊರ್ಗಿ, ವಕ್ವಾಡಿಯಲ್ಲಿ ದಲಿತರಿಗೆ ಮೀಸಲಾದ ಡಿಸಿ ಮನ್ನಾ ಭೂಮಿ ಒತ್ತುವರಿಯಾಗಿದ್ದು, ಬೇರೆ ಬೇರೆಯವರಿಗೆ ಮಾರಾಟ ಆಗುತ್ತಿರುವುದರಿಂದ ದಲಿತರಿಗೆ ಬದಲಿ ಭೂಮಿ ನೀಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜು ಬೆಟ್ಟಿನ ಮನೆ ಅವರು ಮನವಿ ನೀಡಿದರು.
ಮಂದಾರ್ತಿಯಲ್ಲಿ ರೋಸ್ಟರ್ ಪದ್ಧತಿಯಲ್ಲಿ ಅಂಗಡಿ ಏಲಂ ನಡೆಸಬೇಕು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪರಿಶಿಷ್ಟ ವರ್ಗದವರ ಕುಂದುಕೊರತೆ ಸಭೆ ನಿಯಮಿತವಾಗಿ ನಡೆಯುತ್ತಿಲ್ಲ ಎಂದು ಚಂದ್ರಮ ತಲ್ಲೂರು ಗಮನ ಸೆಳೆದರು. ನಗರದ ರಿಕ್ಷಾ ನಿಲ್ದಾಣಗಳಲ್ಲಿ ಪರಿಶಿಷ್ಟ ವರ್ಗದವರಿಗೆ ರಿಕ್ಷಾ ನಿಲುಗಡೆಗೆ ಅವಕಾಶ ನಿರಾಕರಿಸಲಾಗುತ್ತಿದೆ ವಿಜಯ ಕುಂದಾಪುರ ದೂರಿದರು. ಕೋಡಿಯಲ್ಲಿ 94 ಸಿಸಿ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಅಶೋಕ್ ಪೂಜಾರಿ ಕೋಡಿ ಒತ್ತಾಯಿಸಿದರು
ಹೊಸೂರಿನಲ್ಲಿ ಸರ್ಕಾರಿ ಜಾಗದಲ್ಲಿ ಒತ್ತುವರಿ ಮಾಡಿ ಮನೆ ನಿರ್ಮಾಣ ನಡೆಯುತ್ತಿದೆ. ಕಂದಾಯ ಇಲಾಖೆಗೆ ದೂರು ನೀಡಿದರೂ, ಸರಿಯಾದ ಸ್ಪಂದನ ದೊರಕುತ್ತಿಲ್ಲ ಎಂದು ಹೇಳಿದ ನಾಗರತ್ನ ಅವರು ಕಾಮಗಾರಿ ನಿಲ್ಲಿಸಿ, ಒತ್ತುವರಿ ತೆರವು ಮಾಡುವಂತೆ ಆಗ್ರಹಿಸಿದರು. ಈಸ್ಟ್ ಬ್ಲಾಕ್ ವಾರ್ಡ್ ನ ಕಾಮಗಾರಿ ಅನುದಾನ ಬಹದ್ದೂರ್ ಶಾ ವಾರ್ಡ್ಗೆ ಹಾಕಲಾಗಿದೆ, ಇಲ್ಲಿ ಸಹಿ ದುರ್ಬಳಕೆ ಮಾಡಲಾಗಿದೆ ಎಂದು ಪ್ರಭಾವತಿ ಶೆಟ್ಟಿ ಗಮನ ಸೆಳೆದರು. ಖಾರ್ವಿಕೇರಿ ಪ್ರದೇಶದಲ್ಲಿ ತ್ಯಾಜ್ಯ ನೀರು ಬಿಡುವ ಬಗ್ಗೆ ಚಂದ್ರಶೇಖರ ಖಾರ್ವಿ ಪ್ರಾಸ್ತಾಪಿಸಿದರು. ಹಳ್ನಾಡು ಮುಂತಾದ ಕಡೆ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಸಾರ್ವಜನಿಕರು ಮನವಿ ನೀಡಿದರು. ಮನವಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಉಪ ವಿಭಾಗಾಧಿಕಾರಿ ರಶ್ಮಿ ಎಸ್.ಆರ್., ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.