ಬ್ರಹ್ಮಾವರ: ಕರಾವಳಿಯಲ್ಲಿ ಈ ಬಾರಿ ಮುಂಗಾರು ಮಳೆ ಬೇಗನೆ ಆರಂಭಗೊಂಡಿದ್ದು, ರೈತನ ಕೃಷಿ ಚಟುವಟಿಕೆಯೂ ಸಹ ವೇಗ ಪಡೆದಿದ್ದರು, ನಾಟಿ ಕಾರ್ಯ ಚುರುಕಾಗಿದೆ.
ಬ್ರಹ್ಮಾವರ ಮತ್ತು ಕೋಟ ಹೋಬಳಿಯ ಹಲವು ಕಡೆಗಳಲ್ಲಿ ಕಳೆದ ಕೆಲವು ದಿನಗಳಿಂದ ಆಧುನಿಕ ಯಂತ್ರೋಪಕರಣಗಳ ಜತೆಗೆ ಸಾಂಪ್ರದಾಯಿಕ ಕೃಷಿ ಪದ್ಧತಿಯಾದ ಕೋಣದ ಮೂಲಕ ಉಳುಮೆ, ನಾಟಿ ಕಾರ್ಯ ನಡೆಯುತ್ತಿದೆ. ಸ್ಥಳೀಯ ಕಾರ್ಮಿಕರ ಕೊರತೆಯ ಕಾರಣ ಪರ ಜಿಲ್ಲೆಗಳ ಕಾರ್ಮಿಕರಿಂದ ನಾಟಿ ಕಾರ್ಯವನ್ನು ಮಾಡಲಾಗುತ್ತಿದೆ.
ಕಳೆದ ಕೆಲವು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಹಲವು ಕಡೆಗಳಲ್ಲಿ ನೇಜಿಗೆ ಬಿತ್ತಿದ್ದ ಬೀಜ ಕೊಳೆದು ನಾಶವಾಗಿದೆ. ಹೀಗಾಗಿ ಈ ಬಾರಿ ಸಾಕಷ್ಟು ಪ್ರಮಾಣದಲ್ಲಿ ನೇಜಿ ಕೊರತೆ ಎದುರಾಗುವ ಲಕ್ಷಣವಿದೆ. ಇದಕ್ಕಾಗಿ ಕೆಲವು ರೈತರು ನಾಟಿ ಮಾಡುವುದನ್ನೇ ಕೈಬಿಟ್ಟು ಬಿತ್ತನೆಯಲ್ಲಿ ತೊಡಗಿದ್ದಾರೆ. ಈ ಬಾರಿ ಮುಂಗಾರು ಹಂಗಾಮಿಗೆ ಕರಾವಳಿಯ ಸಾಂಪ್ರದಾಯಿಕ ತಳಿ ಎಂ.ಒ.೪. ಬೀಜದ ಕೊರತೆಯಾದ ಕಾರಣ ಹಲವು ಮಂದಿ ಪ್ರಯೋಗದ ರೀತಿಯಲ್ಲಿ ಉಮಾ, ಜ್ಯೋತಿ, ಜಯ, ಎನ್.13 ಮುಂತಾದ ತಳಿ ಉಪಯೋಗಿಸಿ ನೇಜಿ ತಯಾರಿಸಿದ್ದು ಈ ತಳಿಗಳು ಯಾವ ರೀತಿ ಫಸಲು ನೀಡಬಹುದು ಎನ್ನುವ ನಿರೀಕ್ಷೆ ಕೂಡ ರೈತರಲ್ಲಿದೆ.
ಒಟ್ಟಾರೆ ಬೀಜದ ಕೊರತೆ, ನೇಜಿ ಸಮಸ್ಯೆ, ಕೂಲಿಯಾಳು ಸಮಸ್ಯೆಗಳನ್ನು ಮೆಟ್ಟಿ ನಿಂತು ಖುಷಿ ಖುಷಿಯಲ್ಲಿ ಗದ್ದೆಯ ಕಡೆ ರೈತ ಹೆಜ್ಜೆಹಾಕಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.