ADVERTISEMENT

ಹುಟ್ಟೂರ ಸನ್ಮಾನಕ್ಕಿಂತ ಮಿಗಿಲಿಲ್ಲ: ಕೋಟ ಶ್ರೀನಿವಾಸ ಪೂಜಾರಿ

ಚಂಡೀಗಢ ಮುಖ್ಯ ಕಾರ್ಯದರ್ಶಿ ಎಚ್. ರಾಜೇಶ್ ಪ್ರಸಾದ್ ಅಭಿನಂದನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 6:02 IST
Last Updated 16 ನವೆಂಬರ್ 2025, 6:02 IST
ಕಾರ್ಯಕ್ರಮದಲ್ಲಿ ಎಚ್. ರಾಜೇಶ್ ಪ್ರಸಾದ್, ಉಷಾ ದಂಪತಿಯನ್ನು ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ಎಚ್. ರಾಜೇಶ್ ಪ್ರಸಾದ್, ಉಷಾ ದಂಪತಿಯನ್ನು ಸನ್ಮಾನಿಸಲಾಯಿತು   

ಉಡುಪಿ: ವ್ಯಕ್ತಿಗೆ ಎಷ್ಟೇ ಸನ್ಮಾನಗಳು, ಗೌರವಗಳು ಸಿಕ್ಕಿದರೂ ಹುಟ್ಟೂರಿನ ಸನ್ಮಾನ ಎಲ್ಲಕ್ಕಿಂತ ಮಿಗಿಲಾದುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಚಂಡೀಗಢ ಮುಖ್ಯ ಕಾರ್ಯದರ್ಶಿ ಎಚ್. ರಾಜೇಶ್ ಪ್ರಸಾದ್ ಅಭಿನಂದನಾ ಸ್ವಾಗತ ಸಮಿತಿ ವತಿಯಿಂದ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಶನಿವಾರ ಎಚ್. ರಾಜೇಶ್ ಪ್ರಸಾದ್ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಟ್ಟಕಡೆಯ ಸಮಾಜಕ್ಕೆ ಸೇರಿದ ವ್ಯಕ್ತಿಗಳು ಉನ್ನತ ಹುದ್ದೆಗೇರುವುದು ಸುಲಭದ ಮಾತಲ್ಲ. ಅಂತದ್ದರಲ್ಲಿ ಮರಾಠಿ ಸಮುದಾಯದ ರಾಜೇಶ್‌ ಪ್ರಸಾದ್‌ ಅವರು ಉನ್ನತ ಹುದ್ದೆಗೇರುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.

ADVERTISEMENT

ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಮಾತನಾಡಿ, ಕರಾವಳಿಯಲ್ಲಿ ವೈದ್ಯಕೀಯ, ಎಂಜಿನಿಯರಿಂಗ್‌ ಕ್ಷೇತ್ರದ ಕಡೆಗೆ ಹೆಚ್ಚಿನ ವಿದ್ಯಾರ್ಥಿಗಳು ಆಸಕ್ತಿ ವಹಿಸುತ್ತಿದ್ದಾರೆ. ಆದರೆ ಐಎಎಸ್‌, ಕೆಎಎಸ್‌ ಕಡೆಗೆ ಒಲವು ತೋರುತ್ತಿಲ್ಲ ಎಂದು ಹೇಳಿದರು.

ರಾಜೇಶ್ ಪ್ರಸಾದ್ ಅವರು ಈ ಭಾಗದ ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು. ನಮ್ಮಲ್ಲಿ ಪ್ರತಿಭೆ ಇದೆ, ಆದರೆ ಪ್ರಯತ್ನ ಇಲ್ಲ. ಈ ಭಾಗದ ಮಕ್ಕಳಲ್ಲಿ ಐಎಎಸ್‌ ಕನಸನ್ನು ತುಂಬುವ ಕೆಲಸವನ್ನು ನಾವೆಲ್ಲ ಮಾಡಬೇಕಾಗಿದೆ ಎಂದರು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಕುಗ್ರಾಮದಲ್ಲಿ ಹುಟ್ಟಿ, ಸರ್ಕಾರಿ ಶಾಲೆಯಲ್ಲಿ ಕಲಿತು, ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಿ, ಅನಂತರ ಐಎಎಸ್‌ ಮಾಡಿರುವ ರಾಜೇಶ್ ಪ್ರಸಾದ್ ಅವರ ಜೀವನ ಮಿದ್ಯಾರ್ಥಿಗಳಿಗೆ ಪ್ರೇರಣಾದಾಯಕ. ಶ್ರಮ ಪಟ್ಟರೆ ಸಾಮಾನ್ಯ ಕುಟುಂಬಗಳಿಂದ ಬರುವ ವಿದ್ಯಾರ್ಥಿಗಳಿಗೂ ಉನ್ನತ ಸಾಧನೆ ಮಾಡಬಹುದು ಎಂದರು.

ಎಂಜಿಎಂ ಕಾಲೇಜಿನ ವಿಶ್ವಸ್ಥ ಮಂಡಳಿ ಅಧ್ಯಕ್ಷ ಟಿ.ಸತೀಶ್ ಯು. ಪೈ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕ ರಘುಪತಿ ಭಟ್, ಯಕ್ಷಧ್ರುವ ಪಟ್ಲ ಫೌಂಡೇಷನ್‌ ಟ್ರಸ್ಟ್‌ನ ಪಟ್ಲ ಸತೀಶ್‌ ಶೆಟ್ಟಿ, ಎಂಜಿಎಂ ಕಾಲೇಜು ಪ್ರಾಂಶುಪಾಲೆ ವನಿತಾ ಮಯ್ಯ, ಸಂಧ್ಯಾ ಕಾಲೇಜು ಪ್ರಾಂಶುಪಾಲ ದೇವಿದಾಸ್‌ ಎಸ್‌. ನಾಯ್ಕ, ಶ್ರೀಧರ್ ಆರ್. ಪೈ, ಎಂ. ವಿಶ್ವನಾಥ ಪೈ ಇದ್ದರು.

ಕುಯಿಲಾಡಿ ಸುರೇಶ್ ನಾಯಕ್ ಪ್ರಸ್ತಾವಿಕವಾಗಿ‌ ಮಾತನಾಡಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಅಭಿನಂದನಾ ಪತ್ರ ವಾಚಿಸಿದರು. ಪೂರ್ಣಿಮಾ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಎಚ್. ರಾಜೇಶ್ ಪ್ರಸಾದ್, ಉಷಾ ದಂಪತಿಯನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.