ಉಡುಪಿ: ಹೆಬ್ರಿ ಆರ್ಎಫ್ಒ ಮುನಿರಾಜು ವರ್ಗಾವಣೆ ರದ್ದುಪಡಿಸುವಂತೆ ಒತ್ತಾಯಿಸಿ ಪರಿಸರ ಪ್ರೇಮಿಗಳು ‘ಇ ಮೇಲ್ ಹಾಗೂ ಫೋನ್ ಕಾಲ್’ ಅಭಿಯಾನ ಶುರು ಮಾಡಿದ್ದಾರೆ. ಮಂಗಳೂರಿನ ಎನ್ಇಸಿಎಫ್ ಸಂಘಟನೆಯ ಸದಸ್ಯರು ಗುರುವಾರ ಅರಣ್ಯ ಸಚಿವ ಆನಂದ್ ಸಿಂಗ್ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯ ವರ್ಗಾವಣೆ ವಿರುದ್ಧ ಧನಿ ಎತ್ತಿದ್ದಾರೆ.
ಈ ಸಂಬಂಧ ಎನ್ಇಸಿಎಫ್ ಸಂಘಟನೆಯ ಶಶಿಧರ್ ಶೆಟ್ಟಿ ಮಾತನಾಡಿ, ಹೆಬ್ರಿ ಆರ್ಆಫ್ಎಫ್ ಆಗಿದ್ದ ಮನಿರಾಜು ಅರಣ್ಯ ಒತ್ತುವರಿ, ಮರಗಳ ಕಳ್ಳಸಾಗಾಟ, ಪ್ರಾಣಿ ಬೇಟೆಗೆ ಕಡಿವಾಣ ಹಾಕಿದ್ದರು. ಹಲವು ಅಕ್ರಮಗಳನ್ನು ಬಯಲಿಗೆಳೆದಿದ್ದರು. ಇಂತಹ ಅಧಿಕಾರಿಯನ್ನು ಒತ್ತಡಗಳಿಗೆ ಮಣಿದು ಏಕಾಏಕಿ ವರ್ಗಾವಣೆ ಮಾಡಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುನಿರಾಜು ಅವರ 17 ವರ್ಷಗಳ ಸೇವಾವಧಿಯಲ್ಲಿ 17 ಬಾರಿ ಎತ್ತಂಗಡಿ ಮಾಡಲಾಗಿದೆ. ದಕ್ಷ ಅಧಿಕಾರಿಗಳನ್ನು ವರ್ಗಾವಣೆ ಮೂಲಕ ಕೈಕಟ್ಟಿಹಾಕುವ ಪ್ರಯತ್ನಗಳು ನಡೆಯುತ್ತಿವೆ. ಮುನಿರಾಜು ವರ್ಗಾವಣೆ ವಿರುದ್ಧ ಜನಾಭಿಪ್ರಾಯ ರೂಪುಗೊಳ್ಳಬೇಕು. ಪರಿಸರವನ್ನು ಉಳಿಸುವ ಬೆಳೆಸುವ ಅಧಿಕಾರಿಗಳ ಪರವಾಗಿ ನಿಲ್ಲಬೇಕಾಗಿರುವುದು ಪ್ರಜ್ಞಾವಂತ ನಾಗರಿಕರ ಕರ್ತವ್ಯ ಎಂದರು.
ಎನ್ಇಸಿಎಫ್ ಸಂಘಟನೆ ಆರಂಭಿಕ ಹಂತವಾಗಿ ಇ–ಮೇಲ್ ಹಾಗೂ ಫೋನ್ಕಾಲ್ ಅಭಿಯಾನ ಆರಂಭಿಸಿದೆ. ಮುಂದೆ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ವರ್ಗಾವಣೆ ರದ್ದುಕೋರಿ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
‘ಸಚಿವರ ಹಾರಿಕೆ ಉತ್ತರ’
ಮುನಿರಾಜು ವರ್ಗಾವಣೆಯಲ್ಲಿ ನನ್ನ ಪಾತ್ರವಿಲ್ಲ, ನಾನು ಸಚಿವನಾಗುವ ಮೊದಲೇ ವರ್ಗಾವಣೆ ಮಾಡಲಾಗಿತ್ತು. ಪ್ರಾಮಾಣಿಕ ಅಧಿಕಾರಿಯ ಸೇವೆ ಇತರೆ ಜಿಲ್ಲೆಗಳಿಗೂ ಸಿಗಲಿ ಎಂಬ ಹಾರಿಕೆ ಉತ್ತರವನ್ನು ಅರಣ್ಯ ಸಚಿವ ಆನಂದ್ ಸಿಂಗ್ ನೀಡಿದ್ದಾರೆ. ದಕ್ಷ ಅಧಿಕಾರಿ ಎಂಬ ಕಾರಣಕ್ಕೆ ನಾಲ್ಕೈದು ತಿಂಗಳಿಗೊಮ್ಮೆ ವರ್ಗಾವಣೆ ಮಾಡಲು ಸಾಧ್ಯವೇ ಎಂದು ಶಶಿಧರ್ ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.