ಸಾಲಿಗ್ರಾಮ (ಬ್ರಹ್ಮಾವರ): ಇಲ್ಲಿನ ಗುರು ನರಸಿಂಹ ದೇವಸ್ಥಾನದಲ್ಲಿ ಆಗಮ ನಿಗಮಾಗಮ ವೇದ ಪಾಠಶಾಲೆಯ ಘಟಿಕೋತ್ಸವ ಶುಕ್ರವಾರ ನಡೆಯಿತು.
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಮಾತನಾಡಿ, ಎರಡು ದಶಕಗಳಿಂದ ದೇವಸ್ಥಾನದ ಆಶ್ರಯದಲ್ಲಿ ಐದು ವರ್ಷಗಳ ಅವಧಿಯ ವೇದ ಶಿಕ್ಷಣದ ಶಾಲೆ ನಡೆಸಿಕೊಂಡು ಬರಲಾಗುತ್ತಿದೆ. ಉಚಿತ ವಸತಿ, ಬೋಧನೆ ಜೊತೆಗೆ, ವಿದ್ಯಾರ್ಥಿವೇತನ ಕೊಡಲಾಗುತ್ತಿದೆ. ಇಲ್ಲಿ ಶಿಕ್ಷಣ ಪೂರೈಸಿದ ಅನೇಕ ವಿದ್ಯಾರ್ಥಿಗಳು ನಾಡಿನ ವಿವಿಧೆಡೆ ವೈದಿಕ ವೃತ್ತಿಯಲ್ಲಿ ತೊಡಗಿಸಿಕೊಂಡಿರುವುದು ಕ್ಷೇತ್ರದ ಮಹಿಮೆ ಎಂದರು.
ಮೇ 20ರಿಂದ ನೂತನ ವರ್ಷದ ಪ್ರವೇಶಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ತಿಳಿಸಿದರು. ನಾಲ್ವರು ಯಶಸ್ವಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ವಿತರಿಸಿದರು.
ಆಡಳಿತ ಮಂಡಳಿ ಪೂರ್ವ ಅಧ್ಯಕ್ಷ ಎ. ಜಗದೀಶ ಕಾರಂತ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಕಾರ್ಯಕಾರಿಣಿ ಸದಸ್ಯ ಕಾರ್ಕಡ ತಾರಾನಾಥ ಹೊಳ್ಳ, ಕೂಟ ಮಹಾಜಗತ್ತಿನ ಕೇಂದ್ರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುರೇಶ ತುಂಗ, ಸಾಲಿಗ್ರಾಮ ಅಂಗಸಂಸ್ಥೆ ಅಧ್ಯಕ್ಷ ಪಿ.ಸಿ.ಹೊಳ್ಳ ಭಾಗವಹಿಸಿದ್ದರು. ಖಜಾಂಚಿ ಪರಶುರಾಮ ಭಟ್ಟ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.