ADVERTISEMENT

ಸುಮನಾವತಿ ನದಿ ದಂಡೆ ಕುಸಿತ: ಕೃಷಿ ಭೂಮಿಗೆ ಉಪ್ಪುನೀರು; ಆತಂಕ

ಉಪ್ಪುಂದ

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 3:20 IST
Last Updated 14 ಜೂನ್ 2021, 3:20 IST
ಸುಮನಾವತಿ ನದಿ ದಂಡೆಗಳು ಕುಸಿದ ಕಾರಣ ಕೃಷಿ ಭೂಮಿಯಲ್ಲಿ ಉಪ್ಪು ನೀರು ಸಂಗ್ರಹವಾಗಿರುವುದು
ಸುಮನಾವತಿ ನದಿ ದಂಡೆಗಳು ಕುಸಿದ ಕಾರಣ ಕೃಷಿ ಭೂಮಿಯಲ್ಲಿ ಉಪ್ಪು ನೀರು ಸಂಗ್ರಹವಾಗಿರುವುದು   

ಬೈಂದೂರು: ತೌತೆ ಚಂಡಮಾರುತದಿಂದಾಗಿ ಈಚೆಗೆ ಉಪ್ಪುಂದದ ಸುಮನಾವತಿ ನದಿ ದಂಡೆ ಕುಸಿತ ಕಂಡಿದ್ದರಿಂದ 50 ಎಕರೆಗೂ ಅಧಿಕ ಬತ್ತದ ಕೃಷಿ ಭೂಮಿಗೆ ಉಪ್ಪುನೀರು ನುಗ್ಗಿದ ಪರಿಣಾಮ ಕೃಷಿಕರು ಆತಂಕಕ್ಕೆ ಒಳಗಾಗಿದ್ದಾರೆ.

ಗ್ರಾಮದ 4ನೇ ವಾರ್ಡ್‌ನ ಬಾಯಂಹಿತ್ಲು ಕಿರು ಸೇತುವೆ 40 ಮೀ, ನದಿ ದಂಡೆ ಕುಸಿದಿತ್ತು, ರೈತರು ಇದನ್ನು ಸರಿಪಡಿಸುವಂತೆ ಮನವಿ ಸಲ್ಲಿಸಿದ್ದರು. ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರೂ ಸ್ಪಂದನೆ ದೊರೆತಿಲ್ಲ. ಇದರಿಂದ ರೈತರು ಗದ್ದೆಗಳನ್ನು ಹಡಿಲು ಬಿಡುವಂತೆ ಆಗಿದೆ.

ಕುಸಿದ ನದಿ ದಂಡೆಯನ್ನು ರೈತರು ಮರಳು ಚೀಲ ಜೋಡಿಸಿ ತಾತ್ಕಾಲಿಕ ತಡೆ ನಿರ್ಮಿಸುವ ಯತ್ನವೂ ಫಲ ನೀಡಿಲ್ಲ. ಮಳೆ ಆರಂಭವಾಗಿದ್ದರಿಂದ ಎಲ್ಲ ಕಡೆಗಳಲ್ಲಿ ಕೃಷಿ ಚಟುವಟಿಕೆ ಆರಂಭವಾಗಿದ್ದು, ಈ ಪ್ರದೇಶದಲ್ಲಿ ಮಾತ್ರ ಯಾವುದೇ ಕೆಲಸ ಕಾರ್ಯ ನಡೆಯುತ್ತಿಲ್ಲ ಎಂಬ ಅಳಲು ಇಲ್ಲಿನ ರೈತರದು.

ADVERTISEMENT

ಲಾಕ್‌ಡೌನ್ ಕಾರಣ ಕಾಮಗಾರಿ ವಿಳಂಬವಾಗಿದೆ. ಶೀಘ್ರದಲ್ಲಿ ಕೆಲಸ ಮಾಡಿ ಕಾಮಗಾರಿ ನಡೆಸಿ ದಂಡೆ ಸರಿಪಡಿಸಲಾಗುವುದು ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎನ್. ದಿವಾಕರ ಶೆಟ್ಟಿ ಹೇಳಿದರು.

ನದಿ ದಂಡೆ ಕುಸಿದು ಎರಡು ವಾರಗಳಿಂದ ನದಿ ಉಪ್ಪು ನೀರು ಕೃಷಿ ಭೂಮಿಗೆ ನುಗ್ಗುತ್ತಿರುವುದನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಸ್ಥಳೀಯಾಡಳಿತಕ್ಕೆ ಮನವಿ ಸಲಿಸುತ್ತಿದ್ದರೂ, ಯಾರೂ ಬಂದು ನೋಡಿಲ್ಲ. ಇಲ್ಲಿ ಕೃಷಿ ಚಟುವಟಿಕೆ ಸಾಧ್ಯವಿಲ್ಲ. ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಿದ್ದೇವೆ ಎಂದು ಸ್ಥಳೀಯ ಕೃಷಿಕ ಗಿರೀಶ್ ಖಾರ್ವಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.