ADVERTISEMENT

ರಾಷ್ಟ್ರೀಯ ಹೆದ್ದಾರಿ 66 ಉಳಿಸಿ ಹೋರಾಟ: ಮೇಲ್ಸೇತುವೆ ನಿರ್ಮಾಣ– ಏಜೆನ್ಸಿ ನೇಮಕ

ರಾಷ್ಟ್ರೀಯ ಹೆದ್ದಾರಿ 66 ಉಳಿಸಿ ಹೋರಾಟ ಸಮಿತಿಯಿಂದ ಮಾಹಿತಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 7:55 IST
Last Updated 4 ಡಿಸೆಂಬರ್ 2025, 7:55 IST
ಬ್ರಹ್ಮಾವರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಗೋವಿಂದರಾಜ್‌ ಹೆಗ್ಡೆ ಮಾತನಾಡಿದರು
ಬ್ರಹ್ಮಾವರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಗೋವಿಂದರಾಜ್‌ ಹೆಗ್ಡೆ ಮಾತನಾಡಿದರು   

ಬ್ರಹ್ಮಾವರ: ಬ್ರಹ್ಮಾವರ, ಕೋಟ, ಪಡುಬಿದ್ರಿ ಹಾಗೂ ಮೂಲ್ಕಿಯಲ್ಲಿ ಸರ್ವಿಸ್ ರಸ್ತೆ ಮತ್ತು ಮೇಲ್ಸೇತುವೆ ರಚಿಸಲು ವಿಸ್ತ್ರತ ಯೋಜನಾ ವರದಿ ಸಿದ್ದಪಡಿಸಲು ಏಜೆನ್ಸಿ ನೇಮಕವಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ 66 ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಗೋವಿಂದರಾಜ್ ಹೆಗ್ಡೆ ಹೇಳಿದರು.

ಬ್ರಹ್ಮಾವರದ ಹೋಟೆಲ್ ಆಶ್ರಯ ಸಭಾಂಗಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ಸೆ.2ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಬೇಡಿಕೆಗಳ ಕುರಿತು ವಿಸ್ತ್ರತವಾಗಿ ತಿಳಿಸಲಾಗಿತ್ತು. ಸಂಸದರು ಹಾಗೂ ಅಧಿಕಾರಿಗಳು ನಮ್ಮ ಬೇಡಿಕೆಗೆ ಸ್ಪಂದಿಸಿದ್ದಾರೆ. ಬ್ರಹ್ಮಾವರದಲ್ಲಿ 7 ಪಿಲ್ಲರ್‌ಗಳ ಮೇಲ್ಸೇತುವೆ ರಚನೆ, ಭದ್ರಗಿರಿಯಿಂದ ಮಾಬುಕಳ ಸೇತುವೆ ತನಕ ಎರಡೂ ಬದಿಯಲ್ಲಿ ಸರ್ವಿಸ್ ರಸ್ತೆ, ದೂಪದಕಟ್ಟೆ, ಆಕಾಶವಾಣಿ ಬೈಪಾಸ್, ಉಪ್ಪಿನಕೋಟೆಯಲ್ಲಿ ಮೀಡಿಯನ್ ಒಪನಿಂಗ್ ಬಗ್ಗೆ ಆಗ್ರಹಿಸಿ ಸೆ.4ರಂದು ಬ್ರಹ್ಮಾವರ ಬಂದ್ ಮಾಡಿ ಉಪ್ಪಿನಕೋಟೆ ಫಾರ್ಚೂನ್ ಹೋಟೆಲ್‌ನಿಂದ ಧರ್ಮಾವರ ಅಡಿಟೋರಿಯಂವರೆಗೆ ಸಾರ್ವಜನಿಕರ ಸಹಕಾರದಿಂದ ಶ್ರಮದಾನದ ಮೂಲಕ ಸರ್ವಿಸ್ ರಸ್ತೆ ನಿರ್ಮಿಸಲು ತೀರ್ಮಾನಿಸಲಾಗಿತ್ತು ಎಂದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಆಶ್ವಾಸನೆಯಿಂದ ಆಯೋಜಿಸಿದ್ದ ಹೋರಾಟವನ್ನು ಮುಂದೂಡಲಾಗಿತ್ತು. ಜಿಲ್ಲಾಧಿಕಾರಿ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಸಂಸದರು ನೀಡಿದ ಭರವಸೆಯಂತೆ, ಸಂಬಂಧಪಟ್ಟವರ ಜೊತೆ ಪತ್ರ ವ್ಯವಹಾರ ನಡೆಸಿದ್ದಾರೆ. ಕೇಂದ್ರ ಸಾರಿಗೆ ಸಚಿವರ ನಿರ್ದೇಶನದಂತೆ ಸರ್ವಿಸ್ ರಸ್ತೆ ಹಾಗೂ ದೀರ್ಘಕಾಲಿನ ಕ್ರಮಕ್ಕೆ ವಿಸ್ತ್ರತ ಯೋಜನ ವರದಿ (ಡಿಪಿಆರ್) ತಯಾರಿಸಲು ಮೆ. ಧ್ರುವ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆಯ ಎಂಜಿನಿಯರ್‌ಗಳನ್ನು ನೇಮಿಸಲಾಗಿದೆ. ಇವರು 15 ದಿನದೊಳಗೆ ಕೋಟ, ಬ್ರಹ್ಮಾವರ, ಮೂಲ್ಕಿ ಹಾಗೂ ಪಡುಬಿದ್ರಿಗೆ ಭೇಟಿ ನೀಡಲಿದ್ದಾರೆ ಎಂದರು.

ADVERTISEMENT

ಹೋಟೆಲ್‌ ಉದ್ಯಮಿ ರಾಜಾರಾಮ ಶೆಟ್ಟಿ ಮಾತನಾಡಿ, ಬ್ರಹ್ಮಾವರದಲ್ಲಿ ನಡೆಯುತ್ತಿರುವ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು ವೇಗವಾಗಿ ಮಾಡದೇ ಇದ್ದಲ್ಲಿ ಇಲ್ಲಿ ವಹಿವಾಟು ನಡೆಸುವವರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಲಿದ್ದು, ಬೇಗ ಕೆಲಸ ಮುಗಿಸಲು ಅಧಿಕಾರಿಗಳು ಗಮನ ಹರಿಸಬೇಕು ಎಂದರು.

ಗ್ರಾಮ ಪಂಚಾಯಿತಿ ಸದಸ್ಯರಾದ ದೇವಕಿ ಪೂಜಾರ್ತಿ, ನಿರಂಜನ ಶೆಟ್ಟಿ, ಹಾರಾಡಿ ದಯಾನಂದ ಶೆಟ್ಟಿ, ಬಸ್ ಮಾಲೀಕರ ಸಂಘದ ವಸಂತ ಶೆಟ್ಟಿ, ಕಾರು ಚಾಲಕ ಮಾಲೀಕರ ಸಂಘದ ರಮೇಶ, ರಿಕ್ಷಾ ಚಾಲಕ ಮಾಲೀಕರ ಸಂಘದ ರಾಜು ಪೂಜಾರಿ, ರಾಜು ಸಾಲ್ಯಾನ್, ಟೆಂಪೋ ಮಾಲೀಕರ ಸಂಘದಿಂದ ವಿಜಯ ಕುಮಾರ್, ಸಂತೋಷ ಪೂಜಾರಿ, ಗಣೇಶ್ ಶ್ರೀಯಾನ್, ಬ್ರಹ್ಮಾವರ ಅಭಿವೃದ್ಧಿ ಸಮಿತಿಯ ಪ್ರತೀತ್ ಹೆಗ್ಡೆ, ಜೋಯ್ಸನ್, ಕಟ್ಟಡ ಕಾರ್ಮಿಕರ ಸಂಘದ ಸುಭಾಸ್, ಸಿಐಟಿಯು ಸಂಘಟನೆಯ ಶಶಿಧರ ಗೊಲ್ಲ, ಎಸ್.ಎಂ.ಎಸ್. ವಿದ್ಯಾ ಸಂಸ್ಥೆಯ ಅಲ್ವಾರಿಸ್ ಡಿಸಿಲ್ವ, ಗಿಲ್ಬರ್ಟ್ ಡಿಸಿಲ್ವ, ಅಲ್ಬರ್ಟ್ ಡಿಸಿಲ್ವ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.