ಉಡುಪಿ: ಅನುಭವ ಮತ್ತು ಅಭಿವ್ಯಕ್ತಿಯ ಕುರಿತು ಕಾವ್ಯ ಮೀಮಾಂಸಕಾರರು ಸೊಗಸಾಗಿ ನಿರೂಪಿಸಿದ್ದಾರೆ. ಕಾವ್ಯದ ಸೌಂದರ್ಯವನ್ನು ಆಸ್ವಾದಿಸಬೇಕಾದರೆ ಪದ್ಯಗಳ ಅನ್ವಯಕ್ರಮ ಹಾಗೂ ಪದ ವಿಂಗಡಣೆಗಳ ಕಡೆಗೆ ಹೆಚ್ಚಿನ ಗಮನ ನೀಡುವುದು ಅಗತ್ಯ’ ಎಂದು ಭಾಷಾ ವಿದ್ವಾಂಸ ಡಾ.ಪಾದೇಕಲ್ಲು ವಿಷ್ಣುಭಟ್ಟ ಅವರು ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾ ಸಮಿತಿಯಿಂದ ಈಚೆಗೆ ನಡೆದ ವಿಚಾರಗೋಷ್ಠಿಯಲ್ಲಿ ‘ಹಳಗನ್ನಡ ಕಾವ್ಯ ಸೌಂದರ್ಯ’ ವಿಷಯ ಕುರಿತು ವಿಚಾರ ಮಂಡಿಸಿದರು.
‘ಕಾವ್ಯದ ನಿಜವಾದ ಸೌಂದರ್ಯನು ಅರಿಯಲು ಶುದ್ಧ ಮನಸ್ಸಿನಿಂದ, ನಿರ್ಮಲ ದೃಷ್ಟಿಯಿಂದ ಅಧ್ಯಯನ ಹಾಗೂ ಅಭ್ಯಾಸ ಮಾಡಬೇಕಾಗುತ್ತದೆ. ವಿನಯಶೀಲತೆಯ ಜೊತೆಗೆ ವ್ಯಾಕರಣದ ಅರಿವು ಇದ್ದಲ್ಲಿ ಕಾವ್ಯದ ರಸಾಸ್ವಾದನೆ ಸುಲಭಸಾಧ್ಯ’ ಎಂದರು.
ವಿಶ್ವ ಸಂಸ್ಕೃತಿ ಪ್ರತಿಷ್ಠಾನದ ಸಂಚಾಲಕ ಎಚ್.ಪಿ. ರವಿರಾಜ್ ಮಾತನಾಡಿ, ‘ಇದೊಂದು ಹೊಸ ಅವಕಾಶ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಈ ಮಾಧ್ಯಮದ ಮೂಲಕ ಅತಿ ಹೆಚ್ಚು ಜನರನ್ನು ತಲುಪುವಂತಾದದ್ದು ಒಳ್ಳೆಯ ಬೆಳವಣಿಗೆ. ಇಂಥ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಾಗಲಿ’ ಎಂದು ಶುಭ ಹಾರೈಸಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ, ರಾಜ್ಯ ಕಾರ್ಯದರ್ಶಿ ಡಾ.ಮಾಧವ ಮೂಡುಕೊಣಜೆ, ವಿಭಾಗ ಸಂಯೋಜಕ ಶೈಲೇಶ್ ಭಾಗವಹಿಸಿದ್ದರು. ಅಮೃತಾ ಪ್ರಾರ್ಥಿಸಿದರು. ಜಿಲ್ಲಾ ಕಾರ್ಯದರ್ಶಿ ಡಾ. ಪ್ರಜ್ಞಾ ಮಾರ್ಪಳ್ಳಿ ಸ್ವಾಗತಿಸಿದರು. ಸಮಿತಿಯ ಕೋಶಾಧಿಕಾರಿ ಡಾ. ವಿಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.