ಶಿರ್ವ: ಸಾಕು ನಾಯಿಯನ್ನು ಕುಟುಂಬ ಸದಸ್ಯರಂತೆಯೇ ಕಾಣುವವರಿದ್ದಾರೆ. ಅದು ಸತ್ತರೆ ಮನೆಯ ಸದಸ್ಯರು ಅಗಲಿದರೇನೋ ಎಂಬಂತೆ ದುಃಖ ಪಡುವವರಿದ್ದಾರೆ. ಇಂಥಹದ್ದೇ ಶ್ವಾನ ಪ್ರೇಮದ ಅಪರೂಪದ ಪ್ರಸಂಗವೊಂದು ಕಟಪಾಡಿ ಸಮೀಪದ ಮಣಿಪುರದಲ್ಲಿ ನಡೆದಿದೆ.
ಕಾಪುವಿನ ಸಾಮಾಜಿಕ ಕಾರ್ಯಕರ್ತೆ ಮಣಿಪುರ ಬಡಗುಮನೆಯ ಬಿಂದು ಶೆಟ್ಟಿ ಅವರ ಸಾಕುನಾಯಿ ಕೆಲವು ದಿನಗಳ ಹಿಂದೆ ಸತ್ತು ಹೊಗಿತ್ತು. ಮನೆ ಬಳಿ ದಫನ ಮಾಡಿದ್ದರು. ಯಾರೋ ಆಹಾರದಲ್ಲಿ ವಿಷ ಹಾಕಿ ನಾಯಿಯನ್ನು ಸಾಯಿಸಿದ್ದಾರೆ ಎಂದು ಅವರಿಗೆ ಅನುಮಾನ ಬಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಾಯಿಯ ಕಳೇಬರ ಹೊರತೆಗೆಸಿ ಪೋಸ್ಟ್ ಮಾರ್ಟಂ ಮಾಡಿಸಿದ್ದಾರೆ.
ದೂರು ದಾಖಲಾದ ಕಾರಣ ಕಾನೂನು ಪ್ರಕ್ರಿಯೆ, ಮತ್ತು ವೈದ್ಯಕೀಯ ಪರೀಕ್ಷೆ ನಡೆಸಬೇಕಾಯಿತು. ಹೆಡ್ ಕಾನ್ಸ್ಟೇಬಲ್ಗಳಾದ ಅರುಣ್ ಉಪ್ಪೂರು, ಸುಧಾಕರ್ ನಾಯ್ಕ್, ಪ್ರಾಣಿ ದಯಾ ಸಂಘದ ಮಂಜುಳಾ ಸಮಕ್ಷಮದಲ್ಲಿ ನಾಯಿಯ ಕಳೇಬರವನ್ನು ಗುಂಡಿಯಿಂದ ಮೇಲಕ್ಕೆತ್ತಲಾಯಿತು
ಪಶುವೈದ್ಯ ಡಾ.ಚಂದ್ರಕಾಂತ್ ಅವರು ಮರಣೋತ್ತರ ಪರೀಕ್ಷೆ ನಡೆಸಿದ್ದು ವರದಿ ಬರಬೇಕಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.