ಉಡುಪಿ: ಅಂತರರಾಷ್ಟ್ರೀಯ ಖ್ಯಾತಿಯ ಬ್ರಹ್ಮಕುಮಾರಿ ಶಿವಾನಿ ಫೆ.7 ಹಾಗೂ 8ರಂದು ನಗರದ ಎಂಜಿಎಂ ಕಾಲೇಜಿನ ಎಎಲ್ಎನ್ ರಾವ್ ಗ್ರೌಂಡ್ನಲ್ಲಿ ಆಧ್ಯಾತ್ಮಿಕ ಪ್ರವಚನ ನೀಡಲಿದ್ದಾರೆ ಎಂದು ಮಣಿಪಾಲ ಬ್ರಹ್ಮಕುಮಾರಿ ಶಾಖೆಯ ಸಂಚಾಲಕಿ ಬಿ.ಕೆ.ಸೌರಭ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.7ರಂದು ಸಂಜೆ 5.30ರಿಂದ 7.30ರವರೆಗೂ ‘ದ ಕೀ ಟು ಯುವರ್ ಹ್ಯಾಪಿ ಹೋಂ’ ವಿಷಯದ ಕುರಿತು ಶಿವಾನಿ ಪ್ರವಚನ ನೀಡಲಿದ್ದಾರೆ. ಮಾನವೀಯ ಸಂಬಂಧಗಳಲ್ಲಿ ಸಾಮರಸ್ಯ ಕಡಿಮೆಯಾಗುತ್ತಿರುವುದು, ಏಕಾಂಗಿತನ, ಯಂತ್ರಗಳೊಂದಿಗೆ ಹೆಚ್ಚುತ್ತಿರುವ ಸಂಬಂಧ, ಉಸಿರುಗಟ್ಟುತ್ತಿರುವ ವಾತಾವರಣದಂದ ಹೊರಬರುವುದು ಹೇಗೆ ಎಂಬ ವಿಚಾರವನ್ನು ಶಿವಾನಿ ತಿಳಿಸಿಕೊಡಲಿದ್ದಾರೆ ಎಂದು ತಿಳಿಸಿದರು.
8ರಂದು ಬೆಳಿಗ್ಗೆ 6.30ರಿಂದ 8ರವರೆಗೆ ‘ಇಮೋಷನಲ್ ಫಿಟ್ನೆಸ್ ಥ್ರೂ ಮೆಡಿಟೇಷನ್’ ವಿಷಯದ ಕುರಿತು ಪ್ರವಚನ ನೀಡಲಿದ್ದಾರೆ. ದೈಹಿಕ ಹಾಗೂ ಭಾವನಾತ್ಮಕ ಸದೃಢತೆ, ಮನೋಬಲ ಹೆಚ್ಚಿಸಿಕೊಳ್ಳುವುದು ಹೇಗೆ ಎಂಬ ವಿಚಾರದ ಕುರಿತು ಮಾತನಾಡಲಿದ್ದಾರೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ ಆಶ್ರಯದಲ್ಲಿ ಫೆ.7ರಂದು ಜಿಲ್ಲಾಡಳಿತದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ‘ಟ್ರಾನ್ಸ್ಫರ್ಮ್ ವರ್ಕ್ ಪ್ರೆಷರ್ ಟು ವರ್ಕ್ ವಿತ್ ಪ್ಲೆಷರ್’ ವಿಷಯವಾಗಿ ಪ್ರವಚನ ನೀಡಲಿದ್ದಾರೆ.
ಫೆ.9ರಿಂದ 11ರವರೆಗೆ ಬೆಳಿಗ್ಗೆ 7ರಿಂದ 8 ಹಾಗೂ ಸಂಜೆ 6 ರಿಂದ7ರವರೆಗೆ ರಾಜಯೋಗ ಶಿಬಿರ ನಡೆಸಿಕೊಡಲಿದ್ದಾರೆ. ಧ್ಯಾನದಿಂದ ಹೇಗೆ ಸಮಸ್ಯೆಗಳನ್ನು ಎದುರಿಸುವುದು ಎಂಬ ಬಗ್ಗೆ ಮಾತನಾಡಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸುಜಾತಕ್ಕ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.