ಉಡುಪಿ: ಗೋವಾ-ಕರ್ನಾಟಕ ಗಡಿಯಿಂದ ಕುಂದಾಪುರದವರೆಗೆ 187 ಕಿ.ಮೀ ಉದ್ದದ ₹ 2,639 ಕೊಟಿ ವೆಚ್ಚದ ಚತುಷ್ಪಥ ರಸ್ತೆ ಲೋಕಾರ್ಪಣೆ ಸೇರಿದಂತೆ ಉಡುಪಿ– ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹಲವು ರಸ್ತೆ ಕಾಮಗಾರಿಗಳಿಗೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶಿಲಾನ್ಯಾಸ ನೆರವೇರಿಸಿದ್ದು, ಅಭಿವೃದ್ಧಿಯ ವೇಗ ಹೆಚ್ಚಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಶನಿವಾರ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಂದ 33 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಕಾಮಗಾರಿಗೆ ಶಿಲಾನ್ಯಾಸ ಹಾಗೂ ರಸ್ತೆಗಳ ವಿಡಿಯೋ ಕಾನ್ಫರೆನ್ಸ್ ಮೂಲಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೆರೆಗೆ ಹಾಳಾಗಿದ್ದ ಚಾರ್ಮಾಡಿ ಘಾಟಿಯ 13 ಕಿ.ಮೀ ರಸ್ತೆಗೆ ₹ 19.5 ಕೋಟಿ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ, ಗಡಿಕಲ್ಲಿನಿಂದ ಎಸ್ಕೆ ಬಾರ್ಡರ್ವರೆಗೆ ₹ 96.08 ಕೋಟಿ ವೆಚ್ಚದ ಕಾಮಗಾರಿಗೆ, ಪುತ್ತಿಗೆ ಸೇತುವೆ–ಡೆಮ್ಮಾರು–ಎಸ್.ಕೆ ಬಾರ್ಡರ್ವರೆಗೆ ₹ 9 ಕೋಟಿ ವೆಚ್ಚದಲ್ಲಿ ಮೂರು ಸೇತುವೆಗಳ ನಿರ್ಮಾಣಕ್ಕೆ ಸಚಿವ ಗಡ್ಕರಿ ಶಿಲಾನ್ಯಾಸ ನೆರವೇರಿಸಿದ್ದಾರೆ ಎಂದರು.
ಬೈಪಾಸ್ ರಸ್ತೆಗಳ ನಿರ್ಮಾಣ, ಹೊಸ ಸೇತುವೆ, ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳಾಗಿ ಮೇಲ್ದರ್ಜೆಗೇರಿಸಲಾಗಿದೆ. ಮಲ್ಪೆಯಿಂದ ತೀರ್ಥಹಳ್ಳಿವರೆಗಿನ ರಸ್ತೆ ಕಾಮಗಾರಿಗೆ ಪರ್ಕಳದಲ್ಲಿ ತೊಡಕಾಗಿದ್ದ ಭೂಸ್ವಾಧೀನ ಪ್ರಕ್ರಿಯೆಗೆ ಅನುಮತಿ ಸಿಕ್ಕಿದೆ. ಕೋವಿಡ್ ಕಾರಣದಿಂದ ನಿಧಾನಗತಿಯಲ್ಲಿ ಸಾಗಿದ್ದ ಕಾಮಗಾರಿಗಳಿಗೆ ವೇಗ ಸಿಕ್ಕಿದೆ. ಕುಂದಾಪುರದ ಶಾಸ್ತ್ರಿ ಸರ್ಕಲ್ ಕಾಮಗಾರಿ ಮೂರು ತಿಂಗಳಲ್ಲಿ ಮುಗಿಯಲಿದ್ದು, ರಾಷ್ಟ್ರಕ್ಕೆ ಸಮರ್ಪಣೆಯಾಗಲಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.