ಉಡುಪಿ: ‘ಕೊರೊನಾ ಸೋಂಕು ಹರಡುವಿಕೆ ತಡೆ ಹಿನ್ನೆಲೆಯಲ್ಲಿ ಇದೇ 10ರಂದು ಶಬ್–ಎ–ಬರಾತ್ ಹಾಗೂ ಗುಡ್ ಫ್ರೈಡೇ ಆಚರಣೆಗಳನ್ನು ಸಾರ್ವಜನಿಕವಾಗಿ ಆಚರಿಸುವಂತಿಲ್ಲ. ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರರು ಮಸೀದಿ, ದರ್ಗಾ ಹಾಗೂ ಚರ್ಚ್ಗಳಿಗೆ ತೆರಳದೆ ಮನೆಯಲ್ಲಿಯೇ ಹಬ್ಬ ಆಚರಿಸಬೇಕು’ ಎಂದು ಜಿಲ್ಲಾಧಿಕಾರಿ ಜಿಗದೀಶ್ ಸೂಚನೆ ನೀಡಿದರು.
ಎಸ್ಪಿ ಕಚೇರಿಯಲ್ಲಿ ಮಂಗಳವಾರ ಧಾರ್ಮಿಕ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರ ಈಗಾಗಲೇ ಮಸೀದಿ, ಮಂದಿರ ಹಾಗೂ ಚರ್ಚ್ಗಳಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಿಷೇಧಿಸಿದೆ. ಎಲ್ಲ ಧಾರ್ಮಿಕ ಕೇಂದ್ರಗಳಿಗೆ ಭಕ್ತರ ಪ್ರವೇಶವನ್ನೂ ನಿರ್ಬಂಧಿಸಲಾಗಿದೆ. ಎಲ್ಲರೂ ಸರ್ಕಾರದ ಆದೇಶಗಳನ್ನು ಪಾಲಿಸಬೇಕು’ ಎಂದು ಸೂಚಿಸಿದರು.
‘ಶಬ್ ಎ ಬರಾತ್ ದಿನ ಮಸೀದಿ, ದರ್ಗಾ ಹಾಗೂ ಖಬರ್ಸ್ತಾನಗಳಿಗೆ ಪ್ರವೇಶವಿಲ್ಲ. ಮನೆಯಲ್ಲಿಯೇ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಬೇಕು. ಹಾಗೆಯೇ ಗುಡ್ ಫ್ರೈಡೇ ಅಂಗವಾಗಿ ನಾಲ್ಕುದಿನ ನಡೆಯುವ ಧಾರ್ಮಿಕ ವಿಧಿವಿಧಾನಗಳು ಸಹ ಮನೆಯಲ್ಲಿಯೇ ನಡೆಯಬೇಕು. ಚರ್ಚ್ಗಳಲ್ಲಿ ನಡೆಸುವಂತಿಲ್ಲ. ಉಭಯ ಕೋಮಿನ ಮುಖಂಡರು ಸಮಾಜಕ್ಕೆ ಅರಿವು ಮೂಡಿಸಬೇಕು. ಸಂಪ್ರದಾಯದ ಹೆಸರಿನಲ್ಲಿ ಕಾನೂನು ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದರು.
ಎಸ್ಪಿ ವಿಷ್ಣುವರ್ಧನ್ , ‘ಸಮಾಜದ ಸ್ವಾಸ್ಥ್ಯ ಕೆಡಿಸುವ ಸುಳ್ಳು ಸಂದೇಶಗಳನ್ನು ಜಾಲತಾಣಗಳಲ್ಲಿ ಹರಡಿದರೆ ಕಠಿಣ ಕ್ರಮ ಜರುಗಿಸಲಾಗುವುದು. ಲಾಕ್ಡೌನ್ ಅವಧಿ ಮುಗಿಯುವರೆಗೂ ಪ್ರತಿಯೊಬ್ಬರೂ ಮನೆಯಲ್ಲಿದ್ದುಕೊಂಡು ಸಹಕರಿಸಬೇಕು’ ಎಂದರು.
ಕ್ರಿಶ್ಚಿಯನ್ ಮುಖಂಡರೊಬ್ಬರು ಮಾತನಾಡಿ, ‘ಈಗಾಗಲೇ ಬಿಷಪ್ ಅವರ ಸೂಚನೆಯಂತೆ ಎಲ್ಲ ಚರ್ಚ್
ಗಳಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಿಲ್ಲಿಸಲಾಗಿದೆ. ಯಾರೂ ಮನೆಬಿಟ್ಟು ಹೊರಬಾರದು ಎಂಬ ಸೂಚನೆ ನೀಡಿದ್ದು, ಸಮಾಜ ಕಟ್ಟುನಿಟ್ಟಾಗಿ ಪಾಲಿಸುತ್ತಿದೆ’ ಎಂದರು. ಮುಸ್ಲಿಂ ಮುಖಂಡರೊಬ್ಬರು ಮಾತನಾಡಿ, ‘ಮಸೀದಿಗಳಲ್ಲಿ ಪ್ರಾರ್ಥನೆ ನಿರ್ಬಂಧಿಸಿ ಮೌಲ್ವಿಗಳು ಈಗಾಗಲೇ ಫತ್ವಾ ಹೊರಡಿಸಿದ್ದಾರೆ.
ಫತ್ವಾ ಮೀರುವುದು ‘ಹರಾಮ್’ ಕೆಲಸವಾಗಲಿದ್ದು, ಯಾರೂ ಸಾರ್ವಜನಿಕವಾಗಿ ಪ್ರಾರ್ಥನೆ ಸಲ್ಲಿಸುವುದಿಲ್ಲ’ ಎಂದರು. ಸಭೆಯಲ್ಲಿ ಎಎಸ್ಪಿ ಕುಮಾರಚಂದ್ರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.