ADVERTISEMENT

ಆಸ್ಪತ್ರೆಯಿಂದ ಆಂಬುಲೆನ್ಸ್‌ನಲ್ಲಿ ಬಂದು ನೀಟ್‌ ಪರೀಕ್ಷೆ ಬರೆದ ವಿದ್ಯಾರ್ಥಿನಿ

ಮಣಿಪಾಲದ ಮಾಧವ ಕೃಪ ಶಾಲೆಯ ಕೇಂದ್ರದಲ್ಲಿ ನೀಟ್‌ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 5 ಮೇ 2019, 18:12 IST
Last Updated 5 ಮೇ 2019, 18:12 IST
   

ಉಡುಪಿ: ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಎಸ್‌.ಸುಚೇತಾ ಎಂಬ ವಿದ್ಯಾರ್ಥಿನಿ ಭಾನುವಾರ ಆಂಬುಲೆನ್ಸ್‌ನಲ್ಲಿ ಪರೀಕ್ಷಾ ಕೇಂದ್ರಕ್ಕೆ ಬಂದು ನೀಟ್‌ ಪರೀಕ್ಷೆ ಬರೆದರು. ಪರೀಕ್ಷೆ ಮುಗಿಸಿ ಆಂಬುಲೆನ್ಸ್‌ನಲ್ಲಿಯೇ ಆಸ್ಪತ್ರೆಗೆ ಮರಳಿದರು.

ಸುಚೇತಾ ಕುಂದಾಪುರದ ಎಕ್ಸ್‌ಲೆಂಟ್‌ ಕಾಲೇಜು ವಿದ್ಯಾರ್ಥಿನಿ. ಹೊನ್ನಾವರದ ಮಂಕಿಯ ಸುರೇಶ್‌ ನಾಯಕ್ ಅವರ ಪುತ್ರಿ. ಮೇ 1ರಂದುಬ್ರಹ್ಮಾವರದ ಚೇರ್ಕಾಡಿ ಬಳಿ ಸುಚೇತಾಗೆ ಅಪಘಾತವಾಗಿ, ಕಾಲಿನ ಮೂಳೆ ಮುರಿದಿತ್ತು. ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು.

ನೀಟ್‌ ಪರೀಕ್ಷೆ ಬರೆಯಲೇಬೇಕು ಎಂದು ಪಟ್ಟುಹಿಡಿದ ಸುಚೇತಾಗೆ ಆಸ್ಪತ್ರೆಯಿಂದ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಯಿತು. ಮಣಿಪಾಲದಲ್ಲಿರುವ ಮಾಧವ ಕೃಪಾ ಪರೀಕ್ಷಾ ಕೇಂದ್ರದ ಸಿಬ್ಬಂದಿಯೂ ಅನುಕೂಲಕ್ಕೆ ತಕ್ಕಂತೆ ಪರೀಕ್ಷೆ ಬರೆಯಲು ನೆರವು ನೀಡಿದರು.

ADVERTISEMENT

ಬಳಿಕ ಮಾತನಾಡಿದ ಸುಚೇತಾ, ‘ನೀಟ್ ಪರೀಕ್ಷೆಗೆ ಅಗತ್ಯ ತಯಾರಿ ಮಾಡಿಕೊಂಡಿದ್ದೆ. ದುರದೃಷ್ಟವಶಾತ್ ಅಪಘಾತವಾಯಿತು. ದೇವರ ದಯೆಯಿಂದ ಪರೀಕ್ಷೆ ಬರೆಯಲು ಸಾಧ್ಯವಾಯಿತು’ ಎಂದು ಸಂತಸ ವ್ಯಕ್ತಪಡಿಸಿದರು.

ಸುಚೇತಾ ಜತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅನಘ ಎಂಬ ವಿದ್ಯಾರ್ಥಿನಿಯೂ ಪೋಷಕರ ಜತೆಯಲ್ಲಿ ಬಂದು ಮಾಧವ ಕೃಪ ಶಾಲೆಯಲ್ಲಿ ಪರೀಕ್ಷೆ ಬರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.