ಕಾರ್ಕಳ: ಇಲ್ಲಿನ ಬಸ್ ನಿಲ್ದಾಣ ಸಮೀಪದ ಮಾರಿಯಮ್ಮ ದೇವಸ್ಥಾನದ ವಠಾರದಲ್ಲಿ ಭಾನುವಾರ ದೇವಸ್ಥಾನದ ಜೀರ್ಣೋದ್ಧಾರ ಪೂರ್ವಭಾವಿ ಸಭೆ ನಡಯಿತು.
ಮಾರಿಯಮ್ಮ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಸಚಿವ ವಿ. ಸುನಿಲ್ ಕುಮಾರ್ ಮಾತನಾಡಿ,‘ದೇವಸ್ಥಾನದ ಆಂಜನೇಯ, ಉಚ್ಚಂಗಿ ಮಾರಿಗುಡಿ, ನಾಗ, ಪ್ರಧಾನ ದೇವತೆ, ದೈವಗಳ ಗುಡಿ ನಿರ್ಮಾಣ, ಸುಸಜ್ಜಿತ ಸಭಾಂಗಣ, ಮುಂಭಾಗ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕಾಗಿ ಅಂದಾಜು ₹15 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ. ಇದಕ್ಕೆ ಸರ್ಕಾರದಿಂದ ಗರಿಷ್ಠ ಪ್ರಮಾಣದ ಅನುದಾನ ಮಂಜೂರು ಮಾಡುವಂತೆ ಪ್ರಯತ್ನಿಸುತ್ತೇನೆ. ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಜೂ. 19ರಂದು ಮುಷ್ಟಿ ಕಾಣಿಕೆ ಸಮರ್ಪಣೆ ನಡೆಯಲಿದೆ. ಮುಂದಿನ ಮಾರ್ಚ್ ತಿಂಗಳಲ್ಲಿ ಬ್ರಹ್ಮಕಲಶೋತ್ಸವ ನಡೆಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಳ್ಳಬೇಕಾಗಿವೆ. ಭಕ್ತರು ಕರಸೇವೆ ಮೂಲಕ ಹೆಚ್ಚಿನ ಕೆಲಸಗಳು ನಡೆಸಿಕೊಡಬೇಕಾಗಿದೆ’ ಎಂದರು.
ಉದ್ಯಮಿ ಗಣಪತಿ ಹೆಗ್ಡೆ, ಬೋಳ ರಘುರಾಮ್ ಕಾಮತ್, ಕಮಲಾಕ್ಷ ಕಾಮತ್ ತಲಾ ₹1 ಲಕ್ಷ ದೇಣಿಗೆ ನೀಡಿದರು. ಜೀರ್ಣೋದ್ಧಾರ ಕಾರ್ಯಕ್ಕೆ ಕಾಣಿಕೆ ಸಂಗ್ರಹಿಸುವ ನಿಟ್ಟಿನಲ್ಲಿ ಭಕ್ತಾದಿಗಳಿಗೆ ಕಾಣಿಕೆ ಹುಂಡಿ ವಿತರಿಸಲಾಯಿತು.
ಉದ್ಯಮಿ ವಿಜಯ ಕುಮಾರ್ ಶೆಟ್ಟಿ, ಜಗದೀಶ್ ಮಲ್ಯ, ಅರ್ಚಕ ರಘುರಾಮ ಆಚಾರ್, ಪುರುಷೋತ್ತಮ ಕಲ್ಕೂರ ಇದ್ದರು. ನವೀನ್ ದೇವಾಡಿಗ ಸ್ವಾಗತಿಸಿ ನಿರೂಪಿಸಿದರು. ಪ್ರಶಾಂತ್ ಹವಾಲ್ದಾರ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.