ಚಾಮರಾಜನಗರ: ಗಡಿಜಿಲ್ಲೆಯಲ್ಲಿ ಶನಿವಾರ ಕೋವಿಡ್–19ಗೆ ತುತ್ತಾದ ಇಬ್ಬರು ಮೃತಪಟ್ಟಿದ್ದಾರೆ. ಒಬ್ಬರು ಕೋವಿಡ್ಗೆ ದೃಢಪಟ್ಟು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಗೆ ಸ್ಪಂದಿಸದೆಮೃತಪಟ್ಟರೆ, ಇನ್ನೊಬ್ಬರು ಮೃತಪಟ್ಟ ನಂತರ ಅವರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.
ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಕಾರಣದಿಂದ ಅಸುನೀಗಿದವರ ಸಂಖ್ಯೆ 14ಕ್ಕೆ ಏರಿದೆ. ಸೋಂಕು ದೃಢಪಟ್ಟು, ಕೋವಿಡ್–19ಯೇತರ ಕಾರಣದಿಂದ ಮೃತಪಟ್ಟವರ ಸಂಖ್ಯೆ ಐದಕ್ಕೆ ಹೆಚ್ಚಿದೆ.
ಕೊಳ್ಳೇಗಾಲ ತಾಲ್ಲೂಕಿನ ಪುಷ್ಪಪುರದ 40 ವರ್ಷದ ಮಹಿಳೆ (ರೋಗಿ ಸಂಖ್ಯೆ 1,59,849) ಆಗಸ್ಟ್ 4ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ.
ಕೊಳ್ಳೇಗಾಲ ತಾಲ್ಲೂಕು ಹೊಸ ಹಂಪಾಪುರ ಗ್ರಾಮದ ನಿವಾಸಿ 60 ವರ್ಷದ ಪುರುಷರೊಬ್ಬರು (ರೋಗಿ ಸಂಖ್ಯೆ 1,64,939) ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಆಗಸ್ಟ್ 6ರಂದು ಒಳರೋಗಿಯಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆಗ ಅವರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿತ್ತು. ಶನಿವಾರ ಅವರು ಕೊನೆಯುಸಿರೆಳೆದಿದ್ದಾರೆ. ಕೋವಿಡ್–19 ಪರೀಕ್ಷಾ ವರದಿಯೂ ಶನಿವಾರ ಬಂದಿದ್ದು, ಸೋಂಕು ತಗುಲಿರುವುದು ದೃಢಪಟ್ಟಿದೆ.
ಇಬ್ಬರ ಅಂತ್ಯಸ್ಕಾರವನ್ನು ಸರ್ಕಾರದ ಶಿಷ್ಟಾಚಾರದಂತೆ ನಡೆಸಲಾಗಿದೆ.
ದಾಖಲೆಯ ಗುಣಮುಖ: ಈ ಮಧ್ಯೆ, ಶನಿವಾರ ಜಿಲ್ಲೆಯಲ್ಲಿ 68 ಮಂದಿ ಕೋವಿಡ್ನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ ಒಂದು ದಿನದಲ್ಲಿ ಅತಿ ಹೆಚ್ಚು ಮಂದಿ ಸೋಂಕು ಮುಕ್ತರಾಗಿರುವುದು ಇದೇ ಮೊದಲು. ಈ ಮೂಲಕ, ಗುಣಮುಖರಾದವರ ಒಟ್ಟು ಸಂಖ್ಯೆ 701ಕ್ಕೆ ಏರಿದೆ.
ಶನಿವಾರ 60 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 1,103ಕ್ಕೆ ಏರಿದೆ. 383 ಸಕ್ರಿಯ ಪ್ರಕರಣಗಳಿವೆ. 14 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶನಿವಾರ 506 ಗಂಟಲು ದ್ರವದ ಮಾದರಿ ಪರೀಕ್ಷೆ (ಆರ್ಟಿಪಿಸಿಆರ್–481, ರ್ಯಾಪಿಡ್ ಆ್ಯಂಟಿಜೆನ್– 19, ಟ್ರುನಾಟ್–6) ನಡೆಸಲಾಗಿದೆ. 446 ಮಂದಿಯ ವರದಿ ನೆಗೆಟಿವ್ ಬಂದಿವೆ.
60 ಮಂದಿ ಸೋಂಕಿತರ ಪೈಕಿ ಚಾಮರಾಜನಗರ ತಾಲ್ಲೂಕಿನ 21, ಕೊಳ್ಳೇಗಾಲದ 17, ಗುಂಡ್ಲುಪೇಟೆಯ 12, ಯಳಂದೂರಿನ 9 ಮತ್ತು ಹನೂರು ತಾಲ್ಲೂಕಿನ ಒಬ್ಬರು ಇದ್ದಾರೆ.
ಗುಣಮುಖರಾದ 68 ಮಂದಿಯಲ್ಲಿ ಚಾಮರಾಜನಗರ ತಾಲ್ಲೂಕಿನ 25, ಕೊಳ್ಳೇಗಾಲ ತಾಲ್ಲೂಕಿನ 17, ಗುಂಡ್ಲುಪೇಟೆಯ 12, ಯಳಂದೂರಿನ 10, ಹನೂರು ತಾಲ್ಲೂಕಿನ ಮೂವರು ಹಾಗೂ ಮೈಸೂರಿನ ಒಬ್ಬರು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.