ಉಡುಪಿ: ನಗರದ ಚಿತ್ತರಂಜನ್ ಸರ್ಕಲ್ ಬಳಿಯ ಕಸದ ತೊಟ್ಟಿಯಲ್ಲಿ ಸೋಮವಾರ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ.
ಬೆಳಿಗ್ಗೆ ನಗರಸಭೆಯ ಸ್ವಚ್ಛತಾ ಕಾರ್ಮಿಕರು ತೊಟ್ಟಿಯಲ್ಲಿ ಕಸ ಸಂಗ್ರಹಿಸಲು ಹೋದಾಗ ಮಗುವಿನ ಅಳುವ ಶಬ್ಧ ಕೇಳಿ ಶಿಶುವನ್ನು ತೊಟ್ಟಿಯಿಂದ ಹೊರತೆಗೆದು ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ನಗರ ಠಾಣೆ ಪೊಲೀಸರು, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಸಮಾಜ ಸೇವಕ ನಿತ್ಯಾನಂದ ಒಳಕಾಡು ಮಗುವನ್ನು ಸಮೀಪದ ಬಿ.ಆರ್.ಶೆಟ್ಟಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಗು 1.200 ಕೆ.ಜಿ ತೂಕವಿದ್ದು, ಆರೋಗ್ಯವಾಗಿದೆ. ಸದ್ಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಳಿಗ್ಗೆ ಮಗುವನ್ನು ತೊಟ್ಟಿಗೆ ಎಸೆದುಹೋಗಿರುವ ಸಾಧ್ಯತೆಯಿದೆ ಎಂದು ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ಯ ಮಾಹಿತಿ ನೀಡಿದರು.
ಮಳೆಗಾಲವಾಗಿರುವುದರಿಂದ ಮಗು ಸ್ವಲ್ಪ ತಡವಾಗಿ ಸಿಕ್ಕಿದ್ದರೂ ಪ್ರಾಣಾಪಾಯವಾಗುವ ಸಾಧ್ಯತೆ ಇತ್ತು. ಮಗು ಬೇಡವಾದರೆ ನಗರದಲ್ಲಿರುವ ಮಮತೆಯ ತೊಟ್ಟಿಲುಗಳಿಗೆ ತಂದು ಹಾಕಿದರೆ ಪ್ರಾಣ ಉಳಿಯುತ್ತದೆ ಎಂದು ಮನವಿ ಮಾಡಿದರು. ಘಟನೆ ಸಂಬಂಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.