ADVERTISEMENT

ಅಂಗನವಾಡಿಯ ಮೇಲ್ವಾಚಾರಕಿ ಹುದ್ದೆ ಕೊಡಿಸುವುದಾಗಿ ಭರವಸೆ: ಲಕ್ಷಾಂತರ ವಂಚನೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2023, 15:16 IST
Last Updated 1 ಜೂನ್ 2023, 15:16 IST

ಕಾರ್ಕಳ: ಬೆಂಗಳೂರಿನಲ್ಲಿ ಅಂಗನವಾಡಿಯ ಮೇಲ್ವಾಚಾರಕಿ ಹುದ್ದೆಗೆ ನೇಮಕಾತಿ ಮಾಡಿಸಿ ಕೊಡುವುದಾಗಿ ಹಣ ಪಡೆದು ವಂಚಿಸಿದ ಘಟನೆ ತಾಲ್ಲೂಕಿನ ಮುಂಡ್ಕೂರು ಗ್ರಾಮ ಸಚ್ಚರೀಪೇಟೆ ಎಂಬಲ್ಲಿ ನಡೆದಿದೆ.

ಇಲ್ಲಿನ ಪೊಸ್ರಾಲ್ ಶಾಲೆಯ ಹತ್ತಿರ ನಿವಾಸಿ ಶಶಿಕಲಾ ಅವರು ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡಿಕೊಂಡಿದ್ದು ಇವರಿಗೆ ವೇಣು ಗೋಪಾಲ ಎಂಬವರು ಬೆಂಗಳೂರಿನಲ್ಲಿ ಅಂಗನವಾಡಿಯ ಮೇಲ್ವಾಚಾರಕಿಯಾಗಿ ನೇಮಕಾತಿ ಮಾಡಿಸಿ ಕೊಡುವುದಾಗಿಯೂ ₹2ಲಕ್ಷ ಕೇಳಿದ್ದರು. ಅದರಂತೆ ಶಶಿಕಲಾ ಅವರು ಮುಂಡ್ಕೂರು ಗ್ರಾಮದ ಸಚ್ಚರೀಪೇಟೆ ಕೆನರಾ ಬ್ಯಾಂಕ್‌ನ ತನ್ನ ಖಾತೆಯಿಂದ ಕ್ರಮವಾಗಿ ನ. 16ರಂದು ₹80 ಸಾವಿರವನ್ನು ವೇಣುಗೋಪಾಲ ಅವರ ಅಣ್ಣ ವಿಶ್ವನಾಥ್‌ಗೆ, 24ರಂದು ₹1 ಲಕ್ಷ, 25ರಂದು ₹25 ಸಾವಿರ, ಡಿ. 2ರಂದು ₹55 ಸಾವಿರದ 3 ಅನ್ನು, ಡಿ.14 ರಂದು ₹10ಸಾವಿರ, 20ರಂದು ₹10ಸಾವಿರ ಹೀಗೇ 5 ಬಾರಿ ಒಟ್ಟು ₹2 ಲಕ್ಷದ 80ಸಾವಿರ ಹಣವನ್ನು ವೇಣುಗೋಪಾಲ ಅವರ ಬ್ಯಾಂಕ್ ಖಾತೆಗೆ ಕಳುಹಿಸಿದ್ದರು.

ಇಷ್ಟಲ್ಲದೇ ಡಿ.23ರಂದು ವೇಣುಗೋಪಾಲ ಅವರು ಶಶಿಕಲಾ ಅವರ ಮನೆಗೆ ಬಂದು ರಸ್ತೆ ಅಪಘಾತದಲ್ಲಿ ಗಾಯಗೊಂಡ ತನ್ನ ಮಗಳ ಚಿಕಿತ್ಸೆಗಾಗಿ ಸಾಲ ರೂಪದಲ್ಲಿ ₹2.20ಲಕ್ಷವನ್ನು ಪಡೆದಿದ್ದರು. ಆದರೆ ಇದುವರೆಗೂ ಪಡೆದ ಹಣವನ್ನು ವಾಪಾಸು ನೀಡದೇ, ಹಣದ ಕುರಿತು ವಿಚಾರಿಸಿದ ಶಶಿಕಲಾ ಅವರ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿ ವಂಚಿಸುತ್ತಿದ್ದಾರೆ ಎಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.