ಉಡುಪಿ:ಕುಂದಾಪುರ ತಾಲ್ಲೂಕಿನ ಯಡಮೊಗ್ಗೆ ಕುಮ್ಟಿಬೇರು ಗ್ರಾಮದಲ್ಲಿ ಗುರುವಾರ ನಡೆದಿದ್ದ ಮಗುವಿನ ಅಪಹರಣ ಪ್ರಕರಣ ತಿರುವು ಪಡೆದುಕೊಂಡಿದೆ. ತಾಯಿ ರೇಖಾನಾಯ್ಕ ಇಬ್ಬರು ಮಕ್ಕಳ ಜತೆಗೆ ಕುಬ್ಜ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಸಂದರ್ಭ ಹೆಣ್ಣು ಮಗು ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಯಿ ರೇಖಾ ನಾಯ್ಕ ಆತ್ಮಹತ್ಯೆ ಪ್ರಕರಣವನ್ನು ಮುಚ್ಚಿಹಾಕಲು ಮಗುವನ್ನು ಅಪಹರಣಕಾರ ಕದ್ದೊಯ್ದಿದ್ದಾನೆ ಎಂಬ ಕಥೆ ಕಟ್ಟಿದ್ದರು.ಶುಕ್ರವಾರ ಬೆಳಿಗ್ಗೆ ಕುಬ್ಜ ನದಿಯಲ್ಲಿ 1 ವರ್ಷ 3 ತಿಂಗಳ ಕಂದಮ್ಮ ಸಾನ್ವಿಕಾಳ ಮೃತದೇಹ ಪತ್ತೆಯಾಗಿತ್ತು.
ಇದರಿಂದ ಅನುಮಾನ ಗೊಂಡು ತಾಯಿಯನ್ನು ವಿಚಾರಣೆಗೊಳಪಡಿಸಿದಾಗ, 5 ವರ್ಷದ ಗಂಡು ಮಗು ಹಾಗೂ ಕಂದಮ್ಮ ಸಾನ್ವಿಕಾ ಜತೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು ನಿಜ. ಈ ಸಂದರ್ಭ ಹೆಣ್ಣು ಮಗು ನೀರಿನಲ್ಲಿ ಕೊಚ್ಚಿಕೊಂಡು ಹೋಯಿತು. ಇಬ್ಬರು ಮಾತ್ರ ಬದುಕುಳಿದೆವು ಎಂದು ರೇಖಾ ನಾಯ್ಕ ಹೇಳಿಕೆ ನೀಡಿದ್ದಾರೆ ಎಂದು ಎಸ್ಪಿ ನಿಶಾ ಜೇಮ್ಸ್ ತಿಳಿಸಿದರು.
ರೇಖಾ ನಾಯ್ಕ ವಿರುದ್ಧ ಕ್ರಮಕ್ಕೆ ಕಾನೂನು ತಜ್ಞರ ಸಲಹೆ ಪಡೆಯಲಾಗುತ್ತಿದೆ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.