ಉಡುಪಿ: ಮಣಿಪಾಲದ ಎಂಡ್ ಪಾಯಿಂಟ್ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯವಾದ ಕಾರ್ಪೊರೆಟ್ ಕ್ರಿಕೆಟ್ ಲೀಗ್ (ಸಿಸಿಎಲ್–2021) ಟೂರ್ನಿಯಲ್ಲಿ ಮಣಿಪಾಲದ ಕಸ್ತೂರಬಾ ಆಸ್ಪತ್ರೆ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಫೈನಲ್ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಕಸ್ತೂರಬಾ ಆಸ್ಪತ್ರೆ ತಂಡವು ವಿನಯ್ ಅವರ ಆಕರ್ಷಕ ಅರ್ಧ ಶತಕದ (56 ರನ್ 23 ಬಾಲ್) ನೆರವಿನಿಂದ ನಿಗದಿತ 8 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 127 ರನ್ ಕಲೆ ಹಾಕಿತು. ಅವಿನಾಶ್ 7 ಬಾಲ್ಗಳಲ್ಲಿ 28 ರನ್ ಸಿಡಿಸಿದರರೆ, ಹರಿ ಕಿರಣ್ 9 ಬಾಲ್ಗಳಿಗೆ 25 ರನ್ ಬಾರಿಸಿ ತಂಡ ಉತ್ತಮ ರನ್ ಪೇರಿಸಲು ನೆರವಾದರು.
128 ರನ್ ಗುರಿ ಬೆನ್ನತ್ತಿದ ಮಾಹೆ ಮಣಿಪಾಲ್ ತಂಡ 7 ವಿಕೆಟ್ ನಷ್ಟಕ್ಕೆ 91 ರನ್ಗಳಿಸಷ್ಟೆ ಶಕ್ತವಾಯಿತು. ಕಸ್ತೂರಬಾ ಆಸ್ಪತ್ರೆ ತಂಡ 37 ರನ್ಗಳಿಂದ ಮಾಹೆ ತಂಡವನ್ನು ಮಣಿಸಿತು.
ಅವಿನಾಶ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರೆ, ವಿನಯ್ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು. ವಿಘ್ನೇಶ್ ಉತ್ತಮ ಬಾಟ್ಸ್ಮನ್, ವಿನಯ್ ಉತ್ತಮ ಬೌಲರ್ ಶ್ರೇಯ ಮುಡಿಗೇರಿಸಿಕೊಂಡರು.
ಕಸ್ತೂರಬಾ ಆಸ್ಪತ್ರೆ ಮಣಿಪಾಲದಿಂದ ಆಯೋಜಿಸಿದ್ದ ಟೂರ್ನಿಯಲ್ಲಿ ಕಾರ್ಪೊರೇಟ್ ಕಂಪನಿಗಳು, ಬ್ಯಾಂಕ್ ಗಳು, ವೈದ್ಯಕೀಯ ಸಂಘ, ಆಸ್ಪತ್ರೆಗಳು ಹಾಗೂ ಮಾಧ್ಯಮ ತಂಡ ಭಾಗವಹಿಸಿತ್ತು. 3 ದಿನಗಳ ಕಾಲ ಟೂರ್ನಿ ನಡೆಯಿತು. ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಕೆಕೆ ಫಿಶ್ ನೆಟ್ಸ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಬಾಳಿಗಾ ಮಾತನಾಡಿ, ಕ್ರೀಡಾಕೂಟಗಳು ಸಂಸ್ಥೆಗಳ ನಡುವೆ ಸ್ನೇಹದ ಸೇತುವೆಯಾಗಲಿದೆ ಎಂದರು.
ಆರೋಗ್ಯ ವಿಜ್ಞಾನ ವಿಭಾಗದ ಸಹ ಕುಲಪತಿ ಡಾ.ಪಿಎಲ್ಎನ್ಜಿ ರಾವ್, ಕೆಎಂಸಿ ಡೀನ್ ಡಾ.ಶರತ್ ಕೆ.ರಾವ್, ಕಸ್ತೂರ್ಬಾ ಆಸ್ಪತ್ರೆ ಸಿಒಒ ಸಿ.ಜಿ. ಮುತ್ತಣ್ಣ, ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ ಶೆಟ್ಟಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.