ಉಡುಪಿ: ಸಾರ್ವಜನಿಕ ಶಾರದೋತ್ಸವ ಸಮಿತಿ, ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠದ ಆಶ್ರಯದಲ್ಲಿ 10ನೇ ವರ್ಷದ ಸಾರ್ವಜನಿಕ ಶಾರದೋತ್ಸವ (ಉಡುಪಿ ದಸರಾ) ಇದೇ 22ರಿಂದ ಅಕ್ಟೋಬರ್ 3ರವರೆಗೆ ಕೃಷ್ಣಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಶ್ರೀಪಾದರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, 22ರಂದು ಬೆಳಿಗ್ಗೆ 9ಕ್ಕೆ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹ ಪ್ರತಿಷ್ಠಾಪಿಸಲಾಗುವುದು. ಪ್ರತಿದಿನ ದುರ್ಗಾಹೋಮ, 25ರಂದು ದುರ್ಗಾ ನಮಸ್ಕಾರ, ಅ. 1ರಂದು ಚಂಡಿಕಾಹೋಮ ಜರುಗಲಿದೆ ಎಂದರು.
ಭಜನಾ ಕಾರ್ಯಕ್ರಮ, ಸಂಗೀತ, ನೃತ್ಯ ಸಿಂಚನ, ಯಕ್ಷಗಾನ, ನಾಟಕ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ದ್ವಂದ್ವ ಭಜನಾ ಜುಗಲ್ಬಂದಿ ನಡೆಯಲಿದೆ. 25ರಂದು ಸಂಜೆ 4ಕ್ಕೆ ಮಾತೃ ಸಂಗಮ ಕಾರ್ಯಕ್ರಮ ನಡೆಯಲಿದೆ. ಅ. 3ರಂದು ಕೃಷ್ಣ ಮಠದಿಂದ ಶೋಭಾಯಾತ್ರೆ ಹೊರಡಲಿದ್ದು, ನಗರದ ಮುಖ್ಯ ಮಾರ್ಗದಲ್ಲಿ ಸಾಗಿ ಮಲ್ಪೆಯ ಸಮುದ್ರ ತೀರದಲ್ಲಿ ಸಮಾಪನಗೊಂಡು ಜಲಸ್ತಂಭನಗೊಳ್ಳಲಿದೆ ಎಂದು ತಿಳಿಸಿದರು.
ಸಾರ್ವಜನಿಕ ಶಾರದೋತ್ಸವ ಸಮಿತಿ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಗೌರವ ಸಲಹೆಗಾರ ಪ್ರಸನ್ನ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಮೇಶ್ ಭಟ್, ರಾಧಾಕೃಷ್ಣ ಮೆಂಡನ್, ತಾರಾ ಆಚಾರ್ಯ, ವೀಣಾ ಶೆಟ್ಟಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.