
ಕರಗುಂದ(ನರಸಿಂಹರಾಜಪುರ): ತಾಲ್ಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಗುಂದ ಗ್ರಾಮದ ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ವಾಸವಾಗಿದ್ದ ಶಾರದಾ (75) ಎಂಬ ವೃದ್ಧೆಯನ್ನು ಗ್ರಾಮಸ್ಥರು ಸೋಮವಾರ ಬೇರೆ ರಾಜ್ಯದಲ್ಲಿದ್ದ ಮಕ್ಕಳ ಜತೆ ಕಳಿಸಿ ಮಾನವೀಯತೆ ಮೆರೆದಿದ್ದಾರೆ.
ಕರಗುಂದ ಗ್ರಾಮದಲ್ಲಿ ಶಾರದಾ 35 ವರ್ಷದಿಂದ ಒಂಟಿಯಾಗಿ ವಾಸಿಸಿದ್ದರು. ಗ್ರಾಮಸ್ಥರ ಮನೆಗೆ ಹೋಗಿ ಊಟ ತರುತ್ತಿದ್ದರು. ಇತ್ತೀಚೆಗೆ ಮಾನಸಿಕ ಹಾಗೂ ಇತರ ಕಾಯಿಲೆಯಿಂದ ನರಳುತ್ತಿದ್ದ ಅವರಿಗೆ ಗ್ರಾಮಸ್ಥರೇ ಚಿಕಿತ್ಸೆ ಕೊಡಿಸಿದ್ದರು. ವೃದ್ಧೆಯ ಇಬ್ಬರು ಹೆಣ್ಣು ಮಕ್ಕಳು ಬೇರೆ ರಾಜ್ಯದಲ್ಲಿದ್ದರು. ಮಕ್ಕಳೊಂದಿಗೆ ಹೋಗಲು ಒಪ್ಪದ ಮಹಿಳೆ ಇಲ್ಲೇ ಇದ್ದರು. ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಗ್ರಾಮಸ್ಥರು ಮಾಹಿತಿ ನೀಡಿದ್ದರು.
ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ವೀರೇಶ್, ಕಡಹಿನಬೈಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುನಿಲ್ ಕುಮಾರ್, ಸದಸ್ಯೆ ವಾಣಿ ನರೇಂದ್ರ, ಸಮಾಜ ಸೇವಕಿ ಜುಬೇದಾ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ವೃದ್ಧೆಯನ್ನು ಮಗಳೊಂದಿಗೆ ಕಳುಹಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.