ಕಾರ್ಕಳ: ‘ಉತ್ತಮ ಶಿಕ್ಷಣದಿಂದ ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತದೆ’ ಎಂದು ಲಕ್ಷ್ಮೀ ಅಂಬಾಭವಾನಿ ದೇವಸ್ಥಾನದ ಆಡಳಿತ ಮೊಕ್ತೇಸರ ಮಾಧವ ನಾಯ್ಕ್ ಹೇಳಿದರು.
ಕಾರ್ಕಳ– ಹೆಬ್ರಿ ತಾಲ್ಲೂಕು ಮರಾಟಿ ಸಮಾಜ ಸೇವಾ ಸಂಘದ ವತಿಯಿಂದ ದುರ್ಗದ ಲಕ್ಷ್ಮೀ ಅಂಬಾಭವಾನಿ ದೇವಸ್ಥಾನದಲ್ಲಿ ಆಯೋಜಿಸಿದ ಸಂಘದ ಮಹಾಸಭೆ, ಸಾಮೂಹಿಕ ಸತ್ಯನಾರಾಯಣ ಪೂಜೆ, ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೆತ್ತವರು ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ಕೊಡಿಸುವ ಜೊತೆಗೆ ಉತ್ತಮ ಸಂಸ್ಕಾರ ಕಲಿಸುವ ಕೆಲಸ ಮಾಡಬೇಕು. ಮಕ್ಕಳು ದಾರಿ ತಪ್ಪದಂತೆ ಎಚ್ಚರ ವಹಿಸಬೇಕು. ಇದು ಹೆತ್ತವರ ಜವಾಬ್ದಾರಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಶೇಖರ ಕಡ್ತಲ ಮಾತನಾಡಿ, ನಾವು ಜನರ ಆಶೋತ್ತರಗಳಿಗೆ ಸ್ಪಂದಿಸಿ ಕಣ್ಣೀರು ಒರೆಸುವ ಕೆಲಸ ಮಾಡಬೇಕು. ಸಂಘ ನನಗೆ ಏನು ಕೊಟ್ಟಿದೆ ಎಂಬುದಕ್ಕಿಂತ ಸಂಘಕ್ಕೆ ನನ್ನ ಕೊಡುಗೆ ಏನು, ಯಾವ ರೀತಿ ತಾನು ತೊಡಗಿಸಿಕೊಂಡಿದ್ದೇನೆ ಎಂದು ಅರಿತು ನಡೆಯಬೇಕು. ಸಮಾಜದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ, ಉತ್ತಮ ಸಾಧನೆ ಮಾಡಿದ ಸಾಧಕರಿಗೆ ಪ್ರೋತ್ಸಾಹಿಸುವ ಕೆಲಸ ಸಂಘದ ವತಿಯಿಂದ ಪ್ರತಿವರ್ಷ ನಡೆಯಲು ಎಲ್ಲರೂ ಸಹಕಾರ ನೀಡಬೇಕು. ಸಂಘಟನೆಯನ್ನು ಬಲ ಪಡಿಸುವ ನಿಟ್ಟಿನಲ್ಲಿ ಸಮುದಾಯದ ಬಂಧುಗಳು ಮುಂದೆ ಬರಬೇಕು ಎಂದರು.
ಪಳ್ಳಿ ಗ್ರಾಮದ ಲೀಲಾ ಅವರಿಗೆ ವೈದ್ಯಕೀಯ ನೆರವು, ಸಮುದಾಯದ ಸಾಧಕ, ದೇವಿ ಪಾತ್ರಿ ಅಣ್ಣೋಜಿ ನಾಯ್ಕ ಬಚ್ಚಪ್ಪು, ನಾಟಿ ವೈದ್ಯೆ ಶಾಂತಾ, ಇಂದು ನಾಯ್ಕ್ ದುರ್ಗ, ವೈದ್ಯಕೀಯ ಪದವೀಧರೆ ಡಾ.ಸೌಜನ್ಯ ಬಿ. ಅಜೆಕಾರು, ಸ್ವ ಉದ್ಯೋಗಿ ಸುಗಂಧಿ ನಾಯ್ಕ್ ಶಿವಪುರ, ಯಕ್ಷಗಾನ ಕಲಾವಿದ, ಶಿಕ್ಷಕ ಸತೀಶ್ ಬೇಳಂಜೆ, ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ಶರಣ್ ಮುನಿಯಾಲು, ಪಿಯುಸಿ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಚಿತ್ರಕಲೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸುಧಾಕರ್ ನಾಯ್ಕ್ ಬಂಗ್ಲೆಗುಡ್ಡೆ, ಉಮೇಶ್ ನಾಯ್ಕ್ ಸೂಡ, ನೂತನ ಅಧ್ಯಕ್ಷ ಶಂಕರ ನಾಯ್ಕ್ ದುರ್ಗ, ಬಾಬು ನಾಯ್ಕ್ ಸಾಣೂರು, ರಾಜೇಶ್ ನಾಯ್ಕ್ ಮುನಿಯಾಲು, ರಾಘವೇಂದ್ರ ನಾಯ್ಕ್ ಹೆಬ್ರಿ, ಕೃಷ್ಣ ಬಚ್ಚಪ್ಪು, ಶಶಿಕಲಾ ಹಿರ್ಗಾನ, ರಾಜೇಶ್ವರಿ ನಿಟ್ಟೆ, ಕಾರ್ಯಕಾರಿ ಸಮಿತಿ ಸದಸ್ಯರು ಭಾಗವಹಿಸಿದ್ದರು. ಕಾರ್ಯದರ್ಶಿ ಹರೀಶ್ ಇರ್ವತ್ತೂರು ಸ್ವಾಗತಿಸಿದರು. ಶ್ರೀನಿವಾಸ ನಕ್ರೆ ಲೆಕ್ಕಪತ್ರ ಮಂಡಿಸಿದರು. ಪವನ್ ದುರ್ಗ ವಂದಿಸಿದರು. ಪದ್ಮಾಕರ್ ನಾಯ್ಕ್, ರೇವತಿ, ಪ್ರಜ್ಞಾ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.