ADVERTISEMENT

ಅವಿಭಜಿತ ಜಿಲ್ಲೆಯ ಪ್ರಪ್ರಥಮ ಕೊರಗ ಕ್ರೀಡೋತ್ಸವ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2021, 12:53 IST
Last Updated 2 ಫೆಬ್ರುವರಿ 2021, 12:53 IST

ಉಡುಪಿ: ಅವಿಭಜಿತ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅಂತರ ಜಿಲ್ಲಾಮಟ್ಟದ ಕೊರಗರ ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕ ಉತ್ಸವ ಫೆ.5ರಿಂದ 7ರವರೆಗೆ ಜಿಲ್ಲಾ ಕ್ರೀಡಾಂಗಣ ಹಾಗೂ ಬೀಡಿನಗುಡ್ಡೆಯ ಮೈದಾನದಲ್ಲಿ ನಡೆಯಲಿದೆ.

ಮೂಲ ನಿವಾಸಿಗಳಾದ ಕೊರಗ ಜನಾಂಗದವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತಂದು ಆತ್ಮವಿಶ್ವಾಸ ಮೂಡಿಸುವ ಸಲುವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಆಯೋಜಿಸಲಾಗಿದೆ. ಸ್ಪರ್ಧೆಗಳು 14, 16, 18 20 ವರ್ಷದೊಳಗಿನವರ ವಿಭಾಗ ಹಾಗೂ 20 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ನಡೆಯಲಿವೆ.

ಪುರುಷರ ವಿಭಾಗದಲ್ಲಿ ವಾಲಿಬಾಲ್, ಕಬಡ್ಡಿ, ಕ್ರಿಕೆಟ್ ಮತ್ತು ಮಹಿಳೆಯರ ವಿಭಾಗದಲ್ಲಿ ಥ್ರೋಬಾಲ್, ಕೇರಂ, ಚೆಸ್ ಮತ್ತು ಬಿರು ಸ್ಪರ್ಧೆ ನಡೆಯಲಿದೆ. ಸಾಂಸ್ಕೃತಿಕ ಸ್ಪರ್ಧೆ ಕೂಡ ಆಯೋಜಿಸಲಾಗಿದೆ. ವಿಜೇತರಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಪದಕ ನೀಡಲಾಗುವುದು.

ADVERTISEMENT

ಕನಿಷ್ಠ 10 ಕಲಾವಿದರನ್ನು ಒಳಗೊಂಡ ಕಲಾತಂಡಗಳಿಗೆ ಗೌರವಧನ ನೀಡಲಾಗುತ್ತಿದ್ದು, ಉಡುಪಿ ತಾಲ್ಲೂಕಿನ ತಂಡಗಳಿಗೆ ₹ 5,000, ಬ್ರಹ್ಮಾವರ, ಕಾಪು ತಾಲ್ಲೂಕಿನ ತಂಡಗಳಿಗೆ ₹ 7,000, ಬೈಂದೂರು, ಕಾರ್ಕಳ, ಹೆಬ್ರಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕಲಾತಂಡಗಳಿಗೆ ₹ 10,000 ನೀಡಲಾಗುವುದು. ಬುಟ್ಟಿ ಹೆಣೆಯುವ ಪ್ರಾತ್ಯಕ್ಷಿಕೆ ಇರಲಿದೆ. ಭಾಗವಹಿಸುವ ಪ್ರತಿ ಕಲಾವಿದರಿಗೆ ₹ 2,000 ಗೌರವಧನ ನೀಡಲಾಗುವುದು.

ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಇದ್ದು, ಕ್ರಿಕೆಟ್‌ಗೆ 56 ತಂಡ, ವಾಲಿಬಾಲ್‌ಗೆ 35, ಥ್ರೋಬಾಲ್‌ಗೆ 25 ತಂಡಗಳು ನೋಂದಣಿ ಮಾಡಿಕೊಂಡಿವೆ. ಕ್ರೀಡೋತ್ಸವದಲ್ಲಿ 3000ಕ್ಕೂ ಅಧಿಕ ಕೊರಗ ಸಮುದಾಯದ ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ ಇದೆ. ಕೊರಗ ಸಮುದಾಯದ ವೈವಿಧ್ಯಮಯ ಕಲೆ ಸಂಸ್ಕೃತಿ ಅನಾವರಣಗೊಳಿಸುವ ಕ್ರೀಡೋತ್ಸವವನ್ನು ₹ 15 ಲಕ್ಷ ವೆಚ್ಚದಲ್ಲಿ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಕ್ರೀಡಾಂಗಣ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.