ಉಡುಪಿ: ಉದ್ಯಾವರದಲ್ಲಿ ಚಾರಿತ್ರಿಕ ಪರಂಪರೆಗಿಂತ ಸಾಂಸ್ಕೃತಿಕ ಪರಂಪರೆ ಬಹಳ ಪುರಾತನವಾಗಿದ್ದು, ವೀರಭದ್ರ ದೇವಾಲಯ ಮಾತೃ ಆರಾಧನೆಯ ಅತ್ಯಂತ ಪ್ರಾಚೀನ ನೆಲೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ರಾಮಚಂದ್ರ ಭಟ್ ಹೇಳಿದರು.
ದೇವಾಲಯದ ಆವರಣದಲ್ಲಿ ಶಿರ್ವದ ಎಂಎಸ್ಆರ್ಎಸ್ ಕಾಲೇಜಿನ ಎನ್ಎಸ್ಎಸ್ ಘಟಕ ಆಯೋಜಿಸಿದ್ದ ‘ಐತಿಹಾಸಿಕ ಪರಂಪರೆ ಉಳಿಸಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇತಿಹಾಸಕಾರ ಶ್ರೇಯಸ್ ಮಾತನಾಡಿ, ಸ್ಥಳೀಯ ಇತಿಹಾಸದ ಮಾಹಿತಿ ಇರುವ ಶಾಸನ, ದೇವಾಲಯ ಮುಂತಾದ ಪುರಾತನ ಸಾಕ್ಷ್ಯಗಳನ್ನು ಸಂರಕ್ಷಣೆ ಮಾಡಿ, ಮುಂದಿನ ಜನಾಂಗಕ್ಕೆ ಕಾಪಿಡುವ ಕಾರ್ಯವನ್ನು ಮಾಡಬೇಕು. ಈ ಕಾರ್ಯದ ಮಹತ್ವವನ್ನು ಯುವಕರಿಗೆ ಮನದಟ್ಟು ಮಾಡಿಸಬೇಕು ಎಂದರು.
ಪ್ರೊ.ಟಿ.ಮುರುಗೇಶಿ ಮಾತನಾಡಿ, ಉದ್ಯಾವರವು ನಂದಿವಾಹನ ನಂದಿತೆ, ಗರುಡ ವಾಹಿನಿ ಗಾರುಡಿಗೆ, ಹಂಸವಾಹಿನಿ ಹಂಸಿತೆ, ಮಹಾಕಾಳಿ, ಪಂಜುರ್ಲಿ ಮುಂತಾದ ಸಿರಿದೈವಗಳ ಆರಾಧನೆಯ ತಾಣವಾಗಿದೆ. ಇಲ್ಲಿನ ನಾಲ್ಕು ಸಿರಿಗಳು ಮಣ್ಣಿನ ಮೂರ್ತಿಗಳಾಗಿದ್ದು, ಪ್ರಾಚೀನತೆಗೆ ಸಾಕ್ಷಿಯಾಗಿವೆ. ನಂದಳಿಕೆಯ ಸಿರಿದೈವಗಳ ಉಲ್ಲೇಖವಿರುವ ಶಾಸನವೂ ಇಲ್ಲಿದೆ. ವಿಜಯ ನಗರದ ಕಾಲದಲ್ಲಿ ಜನಪದ ದೈವಸ್ಥಾನವನ್ನು ವೀರಭದ್ರನ ಪ್ರತಿಷ್ಠೆಯೊಂದಿಗೆ ದೇವಾಲಯವಾಗಿ ಪರಿವರ್ತಿಸಲಾಯಿತು ಎಂದು ಹೇಳಿದರು.
ನಂತರ ವಿದ್ಯಾರ್ಥಿಗಳಿಗೆ ಶಾಸನಗಳನ್ನು ಪಡಿಯಚ್ಚು ತೆಗೆಯುವ ವಿಧಾನವನ್ನು ಪ್ರಾಯೋಗಿಕವಾಗಿ ಕಲಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.