ADVERTISEMENT

ಮಾಧ್ಯಮದ ಘನತೆ ಹೆಚ್ಚಲು ತುರ್ತು ಬದಲಾವಣೆ ಅಗತ್ಯ: ವೆಂಕಯ್ಯ ನಾಯ್ಡು

ಮಾಹೆ ಆನ್‌ಲೈನ್‌ ಉಪನ್ಯಾಸದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಭಿಮತ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 16:24 IST
Last Updated 18 ಡಿಸೆಂಬರ್ 2020, 16:24 IST
ಎಂ. ವೆಂಕಯ್ಯ ನಾಯ್ಡು
ಎಂ. ವೆಂಕಯ್ಯ ನಾಯ್ಡು   

ಉಡುಪಿ: ಪತ್ರಿಕೋದ್ಯಮದ ಘನತೆಯನ್ನು ಎತ್ತಿಹಿಡಿಯಲು ಮಾಧ್ಯಮ ಕ್ಷೇತ್ರದಲ್ಲಿ ತುರ್ತು ಬದಲಾವಣೆಗಳು ಅಗತ್ಯ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟರು.

ಮಾಹೆಯ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್‌ ಅಕಾಡೆಮಿ ಶುಕ್ರವಾರ ಹಮ್ಮಿಕೊಂಡಿದ್ದ ಎಂವಿ ಕಾಮತ್‌ ಅಂತರ್ಜಾಲ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಧ್ಯಮ ಕ್ಷೇತ್ರದಲ್ಲಿ ಮೌಲ್ಯಗಳು ಕಣ್ಮರೆಯಾಗುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದರು.

ಮಾಧ್ಯಮಗಳಿಂದ ಹರಡುತ್ತಿರುವ ಸುಳ್ಳು ಸುದ್ದಿಗಳು ಸರ್ಕಾರ ಹಾಗೂ ಜನರ ಮಧ್ಯೆ ಬಹುದೊಡ್ಡ ಕಂದಕವನ್ನು ನಿರ್ಮಾಣ ಮಾಡುತ್ತಿದೆ. ಸಧ್ಯದ ಪತ್ರಿಕೋದ್ಯಮದಲ್ಲಿ ನೈತಿಕ ಮೌಲ್ಯಗಳು ಮರೆಯಾಗುತ್ತಿದ್ದು, ಸುದ್ದಿ ಹಾಗೂ ಸುಳ್ಳು ಸುದ್ದಿಯ ನಡುವಿದ್ದ ತೆಳುವಾದ ಗೆರೆ ಮರೆಯಾಗುತ್ತಿದೆ. ಸುದ್ದಿಯಲ್ಲಿ ಅತಿ ರಂಜನೀಯ ಅಂಶಗಳು ಆದ್ಯತೆ ಪಡೆಯುತ್ತಿವೆ ಎಂದರು.

ADVERTISEMENT

ಮಾಧ್ಯಮಗಳಲ್ಲಿಪೇಯ್ಡ್‌ ನ್ಯೂಸ್‌ಗಳ ಅಬ್ಬರದ ನಡುವೆ ಪತ್ರಿಕೋದ್ಯಮದ ಮೌಲ್ಯಗಳು ಕುಸಿಯುತ್ತಿವೆ. ಮಾಧ್ಯಮ ಸ್ವಾತಂತ್ರ್ಯದ ರಕ್ಷಣೆ ಅನಿವಾರ್ಯ ಹಾಗೂ ಬಹಳ ಮುಖ್ಯವಾಗಿದ್ದರೂ ಪತ್ರಿಕಾ ಸ್ವಾತಂತ್ರ್ಯದ ಹೆಸರಿನಲ್ಲಿ ಮಾಧ್ಯಮ ಜವಾಬ್ದಾರಿ ಮರೆಯಬಾರದು ಎಂದು ಸಲಹೆ ನೀಡಿದರು.

ಪ್ರತಿನಿತ್ಯ ಅಣಬೆಗಳನ್ನು ಹುಟ್ಟಿಕೊಳ್ಳುತ್ತಿರುವ ಸುದ್ದಿ ಮಾಧ್ಯಮ ಸಂಸ್ಥೆಗಳಿಂದ ಪತ್ರಿಕೋದ್ಯಮದ ಮೌಲ್ಯಗಳು ಕುಸಿಯುತ್ತಿರುವಂತೆ ಭಾಸವಾಗುತ್ತಿದೆ. ಈಚೆಗೆ ಖ್ಯಾತ ಬಾಲಿವುಡ್‌ ನಟನ ಆತ್ಮಹತ್ಯೆ ಕುರಿತು ಬಿತ್ತರಿಸಿದ ಸುದ್ದಿಗಳು ವೀಕ್ಷಕರನ್ನು ಗೊಂದಲಕ್ಕೀಡುಮಾಡಿದವು. ಸುದ್ದಿ ಮತ್ತು ಅಭಿಪ್ರಾಯಗಳು ಯಾವಾಗಲೂ ಪ್ರತ್ಯೇಕವಾಗಿರಬೇಕು ಎಂದು ವೆಂಕಯ್ಯನಾಯ್ಡು ಅಭಿಪ್ರಾಯಪಟ್ಟರು.

ಮಾಹೆ ಸಹ ಕುಲಪತಿ ಡಾ.ಎಚ್.ಎಸ್‌.ಬಲ್ಲಾಳ್‌, ಎಂಐಸಿ ನಿರ್ದೇಶಕಿ ಡಾ.ಪದ್ಮ ರಾಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.