ADVERTISEMENT

ಸದೃಢ ದೇಶಕ್ಕೆ ಶಿಕ್ಷಣ ಸಂಸ್ಥೆ ಆರಂಭಿಸಿದ ಶ್ರೀಗಳು

ರಾಜಾಂಗಣದಲ್ಲಿ ವಿಭುದೇಶ ತೀರ್ಥರ ಸಂಸ್ಮರಣೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 16:37 IST
Last Updated 1 ಅಕ್ಟೋಬರ್ 2021, 16:37 IST
ಕೃಷ್ಣಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ ಶುಕ್ರವಾರ ಪರ್ಯಾಯ ಅದಮಾರು ಮಠದ ವಿಭುದೇಶ ತೀರ್ಥ ಶ್ರೀಗಳ ಆರಾಧನೆಯ ಪ್ರಯುಕ್ತ ಸಂಸ್ಮರಣಾ ಕಾರ್ಯಕ್ರಮ ನಡೆಯಿತು.
ಕೃಷ್ಣಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ ಶುಕ್ರವಾರ ಪರ್ಯಾಯ ಅದಮಾರು ಮಠದ ವಿಭುದೇಶ ತೀರ್ಥ ಶ್ರೀಗಳ ಆರಾಧನೆಯ ಪ್ರಯುಕ್ತ ಸಂಸ್ಮರಣಾ ಕಾರ್ಯಕ್ರಮ ನಡೆಯಿತು.   

ಉಡುಪಿ: ಕೃಷ್ಣಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ ಶುಕ್ರವಾರ ಪರ್ಯಾಯ ಅದಮಾರು ಮಠದ ವಿಭುದೇಶ ತೀರ್ಥ ಶ್ರೀಗಳ ಆರಾಧನೆಯ ಪ್ರಯುಕ್ತ ಸಂಸ್ಮರಣಾ ಕಾರ್ಯಕ್ರಮ ನಡೆಯಿತು.

ಅದಮಾರು ಹಿರಿಯ ಮಠಾಧೀಶರಾದ ವಿಶ್ವಪ್ರಿಯತೀರ್ಥ ಶ್ರೀಗಳು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಹೆತ್ತ ತಂದೆ–ತಾಯಿ ಮತ್ತು ಹೊತ್ತ ಗುರುಗಳ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕು. ವಿಭುದೇಶ ಗುರುಗಳು ಧೈರ್ಯವಂತರು, ಸಮಯಪ್ರಜ್ಞೆ ಹಾಗೂ ಅಪಾರ ದೇಶಭಕ್ತಿ ಹೊಂದಿದ್ದು, ಸದೃಢ ದೇಶ ಕಟ್ಟಲು ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿದರು. ಸಮಾಜಕ್ಕೆ ಉತ್ತಮ ವ್ಯಕ್ತಿಗಳನ್ನು ನೀಡಿ ಸೇವೆ ಸಲ್ಲಿಸಿದರು. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಮುನ್ನಡೆಯುತ್ತಿರುವುದಾಗಿ ತಿಳಿಸಿದರು.

ಪರ್ಯಾಯ ಪೀಠಾಧೀಶರಾದ ಈಶಪ್ರಿಯತೀರ್ಥ ಶ್ರೀಗಳು ಮಾತನಾಡಿ, ಹಿರಿಯ ಯತಿಗಳು ಉಪನಿಷತ್ತಿನ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ನಂತರದಲ್ಲಿ ಇಂಗ್ಲಿಷ್ ಭಾಷೆಯ ಬಗ್ಗೆ ಸಾಮಾನ್ಯ ಜ್ಞಾನ ಇರಬೇಕೆಂಬ ಆಶಯದಿಂದ ಶಾಲಾ ಕಾಲೇಜುಗಳನ್ನು ಸ್ಥಾಪಿಸಿದರು. ವಿದ್ಯಾವಂತರು ದೇಶದಲ್ಲಿಯೇ ಉಳಿಯಬೇಕೆಂಬ ಹಂಬಲದಿಂದ ಸಂಶೋಧನಾ ಕೇಂದ್ರ ಆರಂಭಿಸಿದರು ಎಂದರು.

ADVERTISEMENT

ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ವಿಭುದೇಶ ತೀರ್ಥರು ವೇದಾಂತ ಹಾಗೂ ವಿಜ್ಞಾನದ ತತ್ವವನ್ನು ಪಡೆದು ಸಾಧಿಸಿದವರು. ಹಳ್ಳಿಯಿಂದ ದಿಲ್ಲಿಯವರೆಗೂ ವಿದ್ಯಾಲಯಗಳನ್ನು ಸ್ಥಾಪಿಸಿ ಸಹಸ್ರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ವಿದ್ಯಾರ್ಜನೆ ನೀಡಿದರು. ಅದಮಾರಿನಂತಹ ಹಳ್ಳಿಯಲ್ಲಿ ಆದರ್ಶ ಗುರುಕುಲ ಸ್ಥಾಪಿಸಿ ವೇದಾಂತ ಅಧ್ಯಯನ ಮಾಡುವವರಿಗೆ ಮಾರ್ಗದರ್ಶಕರಾಗಿದ್ದರು ಎಂದು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.