ಬ್ರಹ್ಮಾವರ: ಕಲಾಮೌಲ್ಯ, ಮೂಲ ಚೌಕಟ್ಟಿನಲ್ಲಿ ಪಾವಿತ್ರ್ಯವನ್ನು ಉಳಿಸಿಕೊಂಡು ಕಲಾವಿದರ ಏಳಿಗೆಯ ಚಿಂತನೆಗಳಿಗೆ ಒತ್ತು ಕೊಡುತ್ತಿರುವ ಯಕ್ಷಧ್ರುವ ಪಟ್ಲ ಫೌಂಡೇಷನ್ ಕಾರ್ಯ ಶ್ಲಾಘನೀಯ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್.ಸಾಮಗ ಹೇಳಿದರು.
ಬ್ರಹ್ಮಾವರ ಬಂಟರ ಭವನದಲ್ಲಿ ಶನಿವಾರ ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ನ 38ನೇ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಮರಸ್ಯದ ಕಲಾ ಬಾಂಧವ್ಯ ಹೇಗಿರಬೇಕು ಎನ್ನುವುದನ್ನು ತೋರಿಸಿಕೊಟ್ಟಿರುವ ಫೌಂಡೇಷನ್, ಯಕ್ಷಗಾನ ಕಲಾವಿದರಲ್ಲದೆ, ನಾಟಕ ಕಲಾವಿದರಲ್ಲೂ ಕೋವಿಡ್ ಕಾಲದಲ್ಲಿ ಧೈರ್ಯ ತುಂಬಿದೆ. ಕಲಾವಿದರು ಎಲ್ಲರೂ ಒಂದೇ ಎನ್ನುವ ಭಾವನೆಯನ್ನು ಎಲ್ಲರಲ್ಲಿಯೂ ಮೂಡಿಸಿ ಗಮನ ಸೆಳೆಯುತ್ತಿದೆ ಎಂದರು.
ಮಂದಾರ್ತಿಯ ಯಕ್ಷ ಕಲಾವಿದ ನರಸಿಂಹ ನಾಯ್ಕ ಅವರ ಕುಟುಂಬಕ್ಕೆ ಪಟ್ಲ ಫೌಂಡೇಷನ್ ವತಿಯಿಂದ ನಿರ್ಮಿಸಲಾದ ನೂತನ ಮನೆಯನ್ನು ಫೌಂಡೇಷನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಹಸ್ತಾಂತರಿಸಿದರು.
ಬ್ರಹ್ಮಾವರ ಘಟಕದ ವತಿಯಿಂದ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಎಂ.ಎ.ನಾಯ್ಕ ಮಂದಾರ್ತಿ ಅವರನ್ನು ಅಭಿನಂದಿಸಲಾಯಿತು. ಘಟಕದ ನೂತನ ಪದಾಧಿಕಾರಿಗಳನ್ನು ಗೌರವಿಸಲಾಯಿತು.
ಬ್ರಹ್ಮಾವರ ಘಟಕದ ಗೌರವಾಧ್ಯಕ್ಷ ಶೇಡಿಕೊಡ್ಲು ವಿಠಲ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಚ್.ಧನಂಜಯ ಶೆಟ್ಟಿ, ಸಾಲಿಗ್ರಾಮ ಮೇಳದ ವ್ಯವಸ್ಥಾಪಕ ಪಿ.ಕಿಶನ್ ಹೆಗ್ಡೆ, ಬ್ರಹ್ಮಾವರ ಬಂಟರ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಮೈರ್ಮಾಡಿ, ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಉದಯ ಕುಮಾರ ಶೆಟ್ಟಿ, ಬ್ರಹ್ಮಾವರ ಘಟಕದ ಪ್ರಧಾನ ಕಾರ್ಯದರ್ಶಿ ಆರೂರು ಶ್ರೀಧರ ವಿ. ಶೆಟ್ಟಿ, ಕೋಶಾಧಿಕಾರಿ ಗುರುರಾಜ್ ರಾವ್ ಆರೂರು, ಗೌರವ ಕಾರ್ಯದರ್ಶಿ ತಿಮ್ಮಪ್ಪ ಶೆಟ್ಟಿ ಆರೂರು, ಕಾರ್ಯದರ್ಶಿ ಸದಾಶಿವ ಅಮೀನ್ ಕೊಕ್ಕರ್ಣೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.