ADVERTISEMENT

ಅಮೃತ ಮಹೋತ್ಸವ ಯಕ್ಷಗಾನ ಪ್ರದರ್ಶನ: ಪ್ರೇಕ್ಷಕರನ್ನು ಸೆಳೆಯುವ ಹೊಸ ಪ್ರಸಂಗ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2021, 12:11 IST
Last Updated 15 ಅಕ್ಟೋಬರ್ 2021, 12:11 IST
ಕೋಟ ಹಂದೆ ವಿಷ್ಣುಮೂರ್ತಿ ವಿನಾಯಕ ದೇವಸ್ಥಾನದ ಆವರಣದಲ್ಲಿ ಸುಜಯೀಂದ್ರ ಹಂದೆ ವಿರಚಿತ ಪ್ರಸಂಗದ ಪ್ರಥಮ ಪ್ರದರ್ಶನವನ್ನು ಪಿ.ಕಿಶನ್ ಹೆಗ್ಡೆ ಉದ್ಘಾಟಿಸಿದರು. ಡಾ.ಕೆ.ಎಸ್ ಕಾರಂತ, ಗೋಪಾಲಕೃಷ್ಣ ನಾಯರಿ, ಸುಜಯೀಂದ್ರ ಹಂದೆ, ಶ್ರೀಧರ ಹಂದೆ, ಜನಾರ್ದನ ಹಂದೆ ಇದ್ದರು.
ಕೋಟ ಹಂದೆ ವಿಷ್ಣುಮೂರ್ತಿ ವಿನಾಯಕ ದೇವಸ್ಥಾನದ ಆವರಣದಲ್ಲಿ ಸುಜಯೀಂದ್ರ ಹಂದೆ ವಿರಚಿತ ಪ್ರಸಂಗದ ಪ್ರಥಮ ಪ್ರದರ್ಶನವನ್ನು ಪಿ.ಕಿಶನ್ ಹೆಗ್ಡೆ ಉದ್ಘಾಟಿಸಿದರು. ಡಾ.ಕೆ.ಎಸ್ ಕಾರಂತ, ಗೋಪಾಲಕೃಷ್ಣ ನಾಯರಿ, ಸುಜಯೀಂದ್ರ ಹಂದೆ, ಶ್ರೀಧರ ಹಂದೆ, ಜನಾರ್ದನ ಹಂದೆ ಇದ್ದರು.   

ಕೋಟ(ಬ್ರಹ್ಮಾವರ): ‘ಪೌರಾಣಿಕ ಕಥಾ ಹಂದರ ಆಧರಿಸಿ ಹೊಸತಲೆಮಾರಿನ ಪ್ರಸಂಗಕರ್ತರು ಪ್ರಸಂಗಗಳನ್ನು ರಚಿಸುತ್ತಿರುವುದು ಸಂತೋಷದ ಸಂಗತಿ. ಜೊತೆಯಲ್ಲಿ ಅಂತಹ ಪ್ರಸಂಗಗಳು ಪ್ರೇಕ್ಷಕರನ್ನು ಯಕ್ಷಗಾನದ ಕಡೆಗೆ ಸೆಳೆಯುತ್ತಿರುವುದು ಅಭಿಮಾನದ ಸಂಗತಿ’ ಎಂದು ಬಹುಮೇಳಗಳ ಯಜಮಾನ ಪಿ.ಕಿಶನ್ ಹೆಗ್ಡೆ ಹೇಳಿದರು.

ಕೋಟ ಹಂದೆ ವಿಷ್ಣುಮೂರ್ತಿ ವಿನಾಯಕ ದೇವಸ್ಥಾನದ ಆವರಣದಲ್ಲಿ ಗುರುವಾರ ವಿನಾಯಕ ವಿವಿಧೋದ್ದೇಶ ಸಹಕಾರಿ ಸಂಘ ಮತ್ತು ಉಡುಪಿ ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಬೆಂಗಳೂರಿನ ಯಕ್ಷದೇಗುಲ ತಂಡವು ಭಾರತ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸುಜಯೀಂದ್ರ ಹಂದೆ ವಿರಚಿತ ‘ರುರು ಪ್ರಮದ್ವರ’ ಯಕ್ಷಗಾನ ಪ್ರಸಂಗದ ಪ್ರಥಮ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ ಮಾತನಾಡಿ, ‘ಜನಪದ ರಂಗಭೂಮಿ ಬಹು ಆಯಾಮಗಳಲ್ಲಿ ಬಹು ಜನರನ್ನು ಮುಕ್ತವಾಗಿ ತಲುಪುವ ಕಾರಣ ರಂಜನೆಯ ಜೊತೆಯಲ್ಲಿ ಅವರನ್ನು ಪ್ರಜ್ಞಾವಂತರನ್ನಾಗಿಸುತ್ತದೆ’ ಎಂದರು. ಪ್ರಸಂಗಕರ್ತ ಹಾಗೂ ಉಪನ್ಯಾಸಕ ಸುಜಯೀಂದ್ರ ಹಂದೆ ಅವರನ್ನು ಸನ್ಮಾನಿಸಲಾಯಿತು.

ADVERTISEMENT

ಸಾಲಿಗ್ರಾಮ ಗುರುನರಸಿಂಹ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್.ಕಾರಂತ, ‘ತ್ರಿಕಣ್ಣೇಶ್ವರಿ’ ಮಾಸ ಪತ್ರಿಕೆಯ ಸಂಪಾದಕ ತೇಜೇಶ್ವರ ರಾವ್, ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಶ್ರೀಧರ ಹಂದೆ, ಕರ್ನಾಟಕ ಕಲಾದರ್ಶಿನಿಯ ಮಂಗಳೂರಿನ ಜನಾರ್ದನ ಹಂದೆ, ಹಂದೆ ದೇವಸ್ಥಾನ ಆಡಳಿತ ಮಂಡಳಿ ಸದಸ್ಯ ವೆಂಕಟರಮಣ ಸೋಮಾಯಾಜಿ ಉಪಸ್ಥಿತರಿದ್ದರು.

ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಅಮರ ಹಂದೆ ಸ್ವಾಗತಿಸಿದರು. ಮಂಜುನಾಥ ಉರಾಳ ವಂದಿಸಿದರು. ಉಪನ್ಯಾಸಕ ರಾಘವೇಂದ್ರ ತುಂಗ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.