ADVERTISEMENT

ಯಕ್ಷಗಾನದಿಂದ ನಿರರ್ಗಳ ಮಾತುಗಾರಿಕೆ: ರಾಜೇಶ ಶೆಟ್ಟಿ

ಸಾಲಿಕೇರಿ ವೀರಭದ್ರ ಯಕ್ಷಗಾನ ಕಲಾ ಸಂಘದ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 4:24 IST
Last Updated 11 ನವೆಂಬರ್ 2025, 4:24 IST
ಸಾಲಿಕೇರಿ ವೀರಭದ್ರ ಯಕ್ಷಗಾನ ಕಲಾ ಸಂಘದ ವಾರ್ಷಿಕೋತ್ಸವ ಮತ್ತು ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಿತು
ಸಾಲಿಕೇರಿ ವೀರಭದ್ರ ಯಕ್ಷಗಾನ ಕಲಾ ಸಂಘದ ವಾರ್ಷಿಕೋತ್ಸವ ಮತ್ತು ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಿತು   

ಬ್ರಹ್ಮಾವರ: ಯಕ್ಷಗಾನವು ವೇದಿಕೆ ಭಯ ನಿವಾರಿಸಿ ನಿರರ್ಗಳ ಮಾತುಗಾರಿಕೆ ಕಲಿಸುತ್ತದೆ.  ಯಕ್ಷಗಾನದಿಂದ ಶಿಕ್ಷಣಕ್ಕೆ ತೊಡಕಾಗದು ಮಕ್ಕಳಿಗೆ ಯಕ್ಷಗಾನ ಕಲೆಯನ್ನು ಕಲಿಸಿ ಎಂದು ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜೇಶ ಶೆಟ್ಟಿ ಬಿರ್ತಿ ಹೇಳಿದರು.

ಸಾಲಿಕೇರಿ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಸಾಲಿಕೇರಿ ವೀರಭದ್ರ ಯಕ್ಷಗಾನ ಕಲಾ ಸಂಘದ ವಾರ್ಷಿಕೋತ್ಸವ ಮತ್ತು ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯಕ್ಷಗುರು ಪ್ರತೀಶ ಕುಮಾರ್ ಮಾತನಾಡಿ, ಅಜಪುರ ಹಾಗೂ ಹಂಗಾರಕಟ್ಟೆ ಯಕ್ಷಗಾನ ಕೇಂದ್ರ ಸ್ಥಾಪನೆಗೂ ಮೊದಲೇ ವೇಷಭೂಷಣದಂತಹ ರಂಗ ಪರಿಕರಗಳು ಸಾಲಿಕೇರಿಯಲ್ಲಿ ದೊರೆಯುತ್ತಿದ್ದವು. ಸಾಲಿಕೇರಿ ಯಕ್ಷಗಾನದ ಮೂಲ ನೆಲೆ ಎಂದರೂ ತಪ್ಪಾಗಲಿಕ್ಕಿಲ್ಲ ಎಂದರು.

ADVERTISEMENT

ದ.ಕ ಜಿಲ್ಲಾ ಪದ್ಮಶಾಲಿ ಮಹಾಸಭಾದ ಪ್ರಧಾನ ಕಾರ್ಯದರ್ಶಿ ವೆಂಕಟ್ರಾಯ ಶೆಟ್ಟಿಗಾರ್ ಮಾತನಾಡಿ, ಮಕ್ಕಳ ಆಂತರಿಕ ಬೆಳವಣಿಗೆ ಹೆಚ್ಚಿಸಲು ಅಗತ್ಯವಿರುವ ಆತ್ಮವಿಶ್ವಾಸ ಯಕ್ಷಗಾನದಿಂದ ಸಿಗುತ್ತದೆ ಎಂದರು.

ಬ್ರಹ್ಮಾವರ ಜಿ.ಎಂ. ವಿದ್ಯಾನಿಕೇತನ ಪಬ್ಲಿಕ್‌ ಸ್ಕೂಲ್‌ನ ಸಂಚಾಲಕ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ಶೈಕ್ಷಣಿಕ ಚಟುವಟಿಕೆ ಜೊತೆಗೆ ಯಕ್ಷಗಾನ ಕಲಿಕೆ ಉತ್ತಮ ಸಂಸ್ಕಾರವನ್ನು ಬೆಳೆಸುತ್ತದೆ ಎಂದರು.

ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಆಡಳಿತ ಮೊಕ್ತೇಸರ ಎಸ್.ಸುರೇಶ ಶೆಟ್ಟಿಗಾರ್ ಉದ್ಘಾಟಿಸಿದರು.

ಸಾಲಿಕೇರಿ ದೇವಳದ ಆಡಳಿತ ಮೊಕ್ತೇಸರ ಎಸ್. ಸುರೇಶ್ ಶೆಟ್ಟಿಗಾರ್, ಉದ್ಯಮಿ ಶ್ರೀಧರ ಶೆಟ್ಟಿಗಾರ್, ಸಂಘದ ಗೌರವಾಧ್ಯಕ್ಷ ರಾಘವ ಶೆಟ್ಟಿಗಾರ್, ಗೌರವ ಸಲಹೆಗಾರ ಜಗದೀಶ ಶೆಟ್ಟಿಗಾರ್, ಉಪಾಧ್ಯಕ್ಷ ರಜನಿಕಾಂತ ಶೆಟ್ಟಿಗಾರ್, ಜ್ಯೋತಿ ಕೆ. ಪೂಜಾರಿ, ಕಾರ್ಯದರ್ಶಿ ರಾಜೇಶ ಶೆಟ್ಟಿಗಾರ್, ಕೋಶಾಧಿಕಾರಿ ಶೈಲಜಾ ಸುಧಾಕರ ಇದ್ದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಸಂಘದ ವಿದ್ಯಾರ್ಥಿಗಳಾದ ದಿಶಾ, ಮನ್ವಿತ್, ಪ್ರಾರ್ಥನಾ, ಆಶ್ಮಿತಾ, ಪ್ರಣಮ್ ಅವರಿಗೆ ದಿ. ವನಿತಾ ಶ್ರೀನಿವಾಸ ಶೆಟ್ಟಿಗಾರ್ ಸ್ಮರಣಾರ್ಥ ವಿದ್ಯಾರ್ಥಿ ವೇತನ ಸಹಿತ ಪ್ರತಿಭಾ ಪುರಸ್ಕಾರ ನೀಡಲಾಯಿತು.

ವೀರಭದ್ರ ಯಕ್ಷ ಪುರಸ್ಕಾರವನ್ನು ಚೆಂಡೆ ವಾದಕ ಕೃಷ್ಣಾನಂದ ಶೆಣೈ ಅವರಿಗೆ ನೀಡಲಾಯಿತು. ಸಂಘದ ಗುರು ಪ್ರತೀಶ್ ಕುಮಾರ್ ಬ್ರಹ್ಮಾವರ ಅವರಿಗೆ ಗುರು ವಂದನೆ ಸಲ್ಲಿಸಲಾಯಿತು. ಬ್ರಹ್ಮಾವರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ರಾಜೇಶ ಶೆಟ್ಟಿ ಬಿರ್ತಿ ಹಾಗೂ ಬ್ರಹ್ಮಾವರ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ರಾಘವ ಶೆಟ್ಟಿಗಾರ್ ಅವರನ್ನು ಗೌರವಿಸಲಾಯಿತು.

ಉಪಾಧ್ಯಕ್ಷೆ ಜ್ಯೋತಿ ಕೆ ಪೂಜಾರಿ ಸ್ವಾಗತಿಸಿದರು. ಕೋಶಾಧಿಕಾರಿ ಶೈಲಜಾ ಸುಧಾಕರ್ ವಂದಿಸಿದರು. ಕಾರ್ಯದರ್ಶಿ ರಾಜೇಶ ಶೆಟ್ಟಿಗಾರ್ ಮಟಪಾಡಿ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಸಂಘದ ವಿದ್ಯಾರ್ಥಿಗಳಿಂದ ಗುರು ಪ್ರತೀಶ್ ಕುಮಾರ್ ಬ್ರಹ್ಮಾವರ ಅವರ ನಿರ್ದೇಶನದಲ್ಲಿ ‘ಕುಮಾರ ವಿಜಯ’ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಿತು.

ಯಕ್ಷಗಾನ ಕಲಿಕೆಯಿಂದ ಉತ್ತಮ ಸಂಸ್ಕಾರ | ಕೃಷ್ಣಾನಂದ ಶೆಣೈ ಅವರಿಗೆ ವೀರಭದ್ರ ಯಕ್ಷ ಪುರಸ್ಕಾರ | ಯಕ್ಷಗುರು ಪ್ರತೀಶ್ ಕುಮಾರ್ ಅವರಿಗೆ ಗುರು ವಂದನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.